ADVERTISEMENT

ಬಾವಿಗೆ ಬಿದ್ದ ಕಾಡುಕೋಣ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 9 ಮೇ 2018, 11:41 IST
Last Updated 9 ಮೇ 2018, 11:41 IST

ಕೋಟ (ಬ್ರಹ್ಮಾವರ): ಹಲವು ದಿನಗ ಳಿಂದ ಕೋಟ ತೆಕ್ಕಟ್ಟೆ ಸುತ್ತಮುತ್ತಲಿನ ಹೊಲ ಗದ್ದೆಗಳಲ್ಲಿ ಸತ್ತಾಡುತ್ತಿದ್ದ ನಾಲ್ಕೈದು ಕಾಡುಕೋಣಗಳ ಪೈಕಿ ಒಂದು ಕೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಸನಗುಂದು ಸರ್ಕಾರಿ ಬಾವಿಗೆ ಭಾನುವಾರ ರಾತ್ರಿ ಬಿದ್ದಿತ್ತು, ಅದನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಸೋಮವಾರ ಕಾಡಿಗೆ ಬಿಡಲಾಯಿತು.

ಭಾನುವಾರ ರಾತ್ರಿ ಬಿದ್ದ ತಕ್ಷಣವೇ ಸ್ಥಳೀಯರು ಗಮನಿಸಿ ಕೋಟ ಆರಕ್ಷಕ ಠಾಣೆಗೆ ತಿಳಿಸಿದ್ದರು. ಪೊಲೀಸ್ ಅಧಿಕಾರಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದರು. ರಾತ್ರಿಯೇ ಕ್ರೇನ್ ಮೂಲಕ ಮೇಲಕ್ಕೆ ತರಲು ಪ್ರಯತ್ನಿಸಲಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ನಂತರ ಸೋಮವಾರ ಬೆಳಿಗ್ಗೆ ಸ್ಥಳೀಯ ಪಶುವೈದ್ಯಾಧಿಕಾರಿ ಮೂಲಕ ಅರಿವಳಿಕೆ ಚುಚ್ಚುಮದ್ದು ನೀಡಿದರೂ, ಪ್ರಯೋಜನವಾಗದ ಕಾರಣ ಮಧ್ಯಾಹ್ನ ಪಿಲಿಕುಳ ವನ್ಯಜೀವಿ ವಿಭಾಗದಿಂದ ಹೈಪವರ್ ಅರಿವಳಿಕೆ ಚುಚ್ಚು ಮದ್ದು ತರಿಸಿ ಡಾ.ವಿಷ್ಣು ಅವರ ನೇತೃತ್ವದಲ್ಲಿ ಚುಚ್ಚುಮದ್ದು ನೀಡಲಾಯಿತು.

ಚುಚ್ಚುಮದ್ದು ನೀಡಿದ ಇಪ್ಪತ್ತು ನಿಮಿಷದ ನಂತರ ಬಾವಿಗಿಳಿದ ಸ್ಥಳೀಯರಾದ ಕೊಡ್ಲಾಡಿಯ ಮಂಜುನಾಥ ನಾಯ್ಕ, ಗೋಪಾಲ ಮಡಿವಾಳ, ಸುಧೀರ್, ನರಸಿಂಹ ನಾಯ್ಕ ಮತ್ತು ಇಲಾಖೆಯ ಸಿಬ್ಬಂದಿ ಮಾರ್ಗದರ್ಶನದಲ್ಲಿ ಸುರಕ್ಷಿತವಾಗಿ ಕೋಡುಕೋಣ ಮೇಲಕ್ಕೆತ್ತುವಲ್ಲಿ ಸಫಲರಾದರು.

ADVERTISEMENT

ಸ್ಥಳದಲ್ಲಿ ಕುಂದಾಪುರದ ಸಹಾಯಕ ಅರಣ್ಯಾಧಿಕಾರಿ ಅಚ್ಚಪ್ಪ, ಶಂಕರನಾರಾಯಣ ವಲಯ ಅರಣ್ಯಾಧಿಕಾರಿ ಎ.ಎ.ಗೋಪಾಲ, ಅರಣ್ಯ ಇಲಾಖೆಯ ರವಿರಾಜ್ ನಾರಾಯಣ್, ಬ್ರಹ್ಮಾವರ ಉಪ ಅರಣ್ಯಾಧಿಕಾರಿ ಜೀವನ್ ಶೆಟ್ಟಿ, ಕುಂದಾಪುರದ ಉದಯ, ಅರಣ್ಯ ರಕ್ಷಕರಾದ ದೇವರಾಜ್ ಪಾಣ, ಶಿವಪ್ಪ ನಾಯ್ಕ್,ಸುರೇಶ್, ಮಂಜುನಾಥ ನಾಯ್ಕ್, ಮಂಜು, ಪರಷುರಾಮ್, ಸೂರ್ಯ, ಸ್ಥಳೀಯ ಪಶು ವೈದ್ಯ ಅರುಣ್ ಕುಮಾರ್ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿ, ಕಾಡುಕೋಣ ಮತ್ತೆ ಕಾಡಿಗೆ ಬಿಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.