ಉಡುಪಿ: ಆಚಾರ ಇಲ್ಲದ ನಾಲಗೆಯಲ್ಲಿ ಪರರನ್ನು ದೂಷಣೆ ಮಾಡುವ ಬಿಜೆಪಿಯವರು ಒಂದು ಸುಳ್ಳನ್ನು ಹಲವು ಬಾರಿ ಹೇಳಿ ಅದನ್ನು ಸತ್ಯ ಮಾಡಲು ಹೊರಟ್ಟಿದ್ದಾರೆ. ಆದರೆ, ಅವರ ಈ ಪ್ರಯತ್ನ ಎಂದಿಗೂ ಯಶಸ್ವಿಯಾಗದು ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ.
ಸಚಿವರು ಕೆಲಸವನ್ನೇ ಮಾಡುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಆದರೆ ಪ್ರಮೋದ್ ಅವರು ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ಜನರಿಗೆ ಗೊತ್ತಿದೆ. ಶ್ರೀಕೃಷ್ಣ, ರಾಮ ಹಾಗೂ ವಾಲ್ಮೀಕಿ ಮಾಂಸಹಾರಿಗಳು ಎಂದು ಸಚಿವರು ನೀಡಿದ ಹೇಳಿಕೆಯನ್ನೇ ದೊಡ್ಡ ವಿಷಯ ಮಾಡಲಾಗುತ್ತಿದೆ. ತಾವೊಬ್ಬರೇ ದೈವ ಭಕ್ತರು ಎಂಬಂತೆ ಬಿಜೆಪಿಯವರು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರಾದ ಪ್ರಖ್ಯಾತ್ ಶೆಟ್ಟಿ, ರಮೇಶ್ ಕಾಂಚನ್, ಗಣೇಶ್ ನೆರ್ಗಿ, ಸದಾಶಿವ ಕೋಟ್ಯಾನ್ ಕಟ್ಟೆಗುಡ್ಡೆ, ಹಸನ್ ಸಾಹೇಬ್ ಅಜ್ಜರಕಾಡು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾವಿರಾರು ವರ್ಷಗಳ ಹಿಂದೆ ನಡೆದ ಘಟನೆಯನ್ನು ಈಗ ಏಕೆ ಪ್ರಸ್ತಾಪಿಸಲಾಗುತ್ತಿದೆ ಎಂದು ಬಿಜೆಪಿ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಪ್ರಶ್ನಿಸಿದ್ದಾರೆ. ಅಲ್ಲದೆ, ಪ್ರಮೋದ್ ಅವರ ಜೊತೆಗೆ ನಾವು ಕುಳಿತು ಊಟ ಮಾಡಿದ್ದೇವೆ. ರಾಮ– ಕೃಷ್ಣರ ಜೊತೆಯಲ್ಲಿ ಪ್ರಮೋದ್ ಊಟ ಮಾಡಿದ್ದರೆ ಎಂದು ಸಹ ಕೇಳಿದ್ದಾರೆ. ಚೈತ್ರ ಆತ್ಮಹತ್ಯೆ ಪ್ರಕರಣದ ಆರೋಪಿಗಳನ್ನು ರಕ್ಷಿಸಲು ಸಚಿವರು ದೂರವಾಣಿ ಕರೆ ಮಾಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಸಚಿವರು ದೂರವಾಣಿ ಕರೆ ಮಾಡುವಾಗ ಬಿಜೆಪಿ ಮುಖಂಡರೂ ಜೊತೆಯಿದ್ದರೆ ಎಂದು ಅವರು ವ್ಯಂಗ್ಯವಾಡಿದ್ದಾರೆ. ಕರೆ ಮಾಡಿದ್ದು ಸತ್ಯವೇ ಆಗಿದ್ದರೆ ಅದನ್ನು ಸಾಬೀತುಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ದೈವ ಭಕ್ತರು ಸಾಕಷ್ಟು ಮಂದಿ ಕಾಂಗ್ರೆಸ್ನಲ್ಲಿಯೂ ಇದ್ದಾರೆ ಎನ್ನು ವುದನ್ನು ಬಿಜೆಪಿ ಅರಿತುಕೊಳ್ಳಲಿ. ಪ ರ್ಯಾಯ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಅವರು ಬ್ರಾಹ್ಮಣರು ಮಾಂಸ ತಿನ್ನಬಾರದೆಂದು ಹೇಳಿದ್ದಾರೆ, ರಘುಪತಿ ಭಟ್ಟರೇ ನೀವು ಬ್ರಾಹ್ಮಣ ರಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಕನಕನಿಗೆ ಒಲಿದ ಶ್ರೀ ಕೃಷ್ಣನ ನಾಡಿನಲ್ಲಿ ಕನಕನ ಆದರ್ಶವನ್ನು ಮತ್ತು ಶ್ರೀ ಕೃಷ್ಣನ ಸಂದೇಶವನ್ನು ಸಚಿವರು ಪಾಲಿಸು ತ್ತಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜ ಕೀಯ ಮಾಡುವ ಬಿಜೆಪಿಯವರನ್ನು ದಾಸರ ಕೀರ್ತನೆಯಂತೆ ‘ಆಚಾರವಿಲ್ಲದೆ ವಿಚಾರವಿಲ್ಲದ ನಾಲಿಗೆ ಪರರನ್ನು ದೂಷಿಸುವ ನಿನ್ನ ನೀಚ ಬುದ್ಧಿಯ ಬಿಡು ನಾಲಗೆ’ ಎಂದು ಟೀಕಿಸದೆ ವಿಧಿಯಿಲ್ಲ. ವಿನಾಕಾರಣ ದೂಷಿಸುವ ಕೆಲಸವನ್ನು ಇನ್ನಾದರೂ ಬಿಜೆಪಿಯ ಮುಖಂಡರು ನಿಲ್ಲಿಸಲಿ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.