ADVERTISEMENT

ಭ್ರಷ್ಟಾಚಾರದಿಂದ ನೈತಿಕ ಅಧಃಪತನ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:00 IST
Last Updated 1 ಅಕ್ಟೋಬರ್ 2012, 6:00 IST

ಉಪ್ಪುಂದ (ಬೈಂದೂರು):  ವ್ಯಕ್ತಿಗೆ ಹೇಗೋ ಹಾಗೆ ಜನ ಸಮುದಾಯಕ್ಕೂ ಅದರದೇ ಆದ ಕರ್ಮಾಚರಣೆಯ ಹೊಣೆ ಇದೆ. ಅವು ಅದರಿಂದ ವಿಮುಖ ವಾದಾಗ ಅಧಃಪತನಗೊಳ್ಳುತ್ತವೆ. ಆಗ ಮನೆ ಮತ್ತು ಮನದಲ್ಲಿ ಶಾಂತಿ ಹೊರಟುಹೋಗುತ್ತದೆ ಎಂದು  ಕುಂದಾಪುರ ಭಂಡಾರ್ಕಾರ್ಸ್‌ ಕಾಲೇಜಿನ ಪ್ರಾಧ್ಯಾಪಕ ಎಸ್. ನಾರಾಯಣ ರಾವ್ ಅಭಿಪ್ರಾಯಪಟ್ಟರು.

ಉಪ್ಪುಂದದ ರಾಘವೇಂದ್ರ ಸ್ವಾಮಿ ಮಠದಲ್ಲಿ ಭಾನುವಾರ ನಡೆದ ಕುಂದಾಪುರ ತಾಲ್ಲೂಕು ಹವ್ಯಕ ಸಭಾದ ವಾರ್ಷಿಕ ಅಧಿವೇಶನದಲ್ಲಿ ಅವರು ಪ್ರಧಾನ ಭಾಷಣ ಮಾಡಿದರು. ದೈವ ಭಯವಿಲ್ಲದವರು ರಾಕ್ಷಸರಾಗುತ್ತಾರೆ. ಮನುಷ್ಯನೊಳಗಿನ ಕೆಡುಕಿಗೆ ಅದು ಕಾರಣವಾಗುತ್ತದೆ. ಇದನ್ನು ಸಮುದಾಯದ ಎಲ್ಲರಿಗೂ ತಿಳಿಸುವ ಕೆಲಸ ಆಗಬೇಕು ಎಂದು ಅವರು ಹೇಳಿದರು. 

ಸಭಾದ ಅಧ್ಯಕ್ಷ ಎಂ. ಜಗದೀಶ ಅವಭೃತ ಅಧ್ಯಕ್ಷತೆ ವಹಿಸಿದ್ದರು. ಹಟ್ಟಿಯಂಗಡಿ ಸಿದ್ಧಿವಿನಾಯಕ ದೇವಸ್ಥಾನದ ಧರ್ಮದರ್ಶಿ ಎಚ್. ರಾಮಚಂದ್ರ ಭಟ್ ಸಂಘಟನೆಯನ್ನು ದೃಢಗೊಳಿಸಿ ಸಮುದಾಯದ ದುರ್ಬಲರಿಗೆ ಶಕ್ತಿ ನೀಡುವ ಕೆಲಸಕ್ಕೆ ಆದ್ಯತೆ ನೀಡಬೇಕು ಎಂಬ ಸಲಹೆ ನೀಡಿದರು. 

ಕಾರ್ಯದರ್ಶಿ ಯು. ಸಂದೇಶ ಭಟ್ ಸ್ವಾಗತಿಸಿ, ಕಳೆದ ಸಾಲಿನ ವರದಿ ಮಂಡಿಸಿದರು. ಕೋಶಾಧಿಕಾರಿ ಡಾ. ಎಂ.ವಿ.ನಾರಾಯಣಸ್ವಾಮಿ ಆಯವ್ಯಯ ವಿವರ ನೀಡಿದರು. ಎಂ. ನಾಗರಾಜ ಭಟ್ ನಿರೂಪಿಸಿ ವಂದಿಸಿದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ಕೆ. ವಿ. ಶ್ರೀಧರ ಅಡಿಗ ಮತ್ತು ಉಪ್ರಳ್ಳಿ ಜನಾರ್ದನ ದೇವಸ್ಥಾನದ ಆಡಳಿತ ಧರ್ಮದರ್ಶಿ ಯು. ಶ್ರೀಪಾದ ಭಟ್ ಅವರನ್ನು ಸನ್ಮಾನಿಸಲಾಯಿತು. ಈ ಸಾಲಿನ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಟಿ. ಉಷಾ, ಟಿ. ನಾಗೇಂದ್ರ, ಬಿ. ಶ್ರೇಯಾ, ನಯನಾ ಭಟ್ ಅವರಿಗೆ ನಗದು ಪುರಸ್ಕಾರ ವಿತರಿಸಲಾಯಿತು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.