ADVERTISEMENT

`ಮಹಾವೀರರ ಸಂದೇಶ ಸದಾ ಪ್ರಸ್ತುತ'

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 9:59 IST
Last Updated 24 ಏಪ್ರಿಲ್ 2013, 9:59 IST

ಕಾರ್ಕಳ: ಭಗವಾನ್ ಮಹಾವೀರರ ಸಂದೇಶ ಇಂದಿಗೂ ಪ್ರಸ್ತುತ ಎಂದು ದಾನಶಾಲೆಯ ಜೈನಮಠದ ಯತಿ ಲಲಿತಕೀರ್ತಿ ಭಟ್ಟಾರಕ ಸ್ವಾಮಿಜಿ ಇಲ್ಲಿ ತಿಳಿಸಿದರು.

ಹಿರಿಯಂಗಡಿಯ ಭೈರಾದೇವಿ ಜಿನೇಂದ್ರ ಬಸದಿಯ ಮಹಾವೀರ ಭವನದಲ್ಲಿ ಮಂಗಳವಾರ ನಡೆದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ, ಅವರು ಮಹಾವೀರರ ಸಂದೇಶ ಕೇವಲ ಜೈನ ಸಮಾಜಕ್ಕೆ ಮಾತ್ರವಲ್ಲ ಎಲ್ಲರಿಗೂ ಅಗತ್ಯ ಎಂದು ಹೇಳಿದರು.

ಜಗತ್ತಿನಲ್ಲಿ ಇಂದು ಸರ್ವತ್ರ ಅಶಾಂತಿ, ಹಿಂಸೆ ಕಾಣುತ್ತಿವೆ. ಜನ ಕಂಗಾಲಾಗುತ್ತಿದ್ದಾರೆ. ಇದಕ್ಕೆ ಪರಿಹಾರವೇ ಮಹಾವೀರರ ಸಂದೇಶ. ಮಹಾವೀರರ ತ್ಯಾಗ, ಸತ್ಯ ಹಾಗೂ ಅಹಿಂಸೆ ಎಂದು ಮಹಾವೀರರ ಬದುಕಿಗೆ ಮಹತ್ವದ ಹಂತಗಳನ್ನು ಸ್ಮರಿಸಿಕೊಂಡರು.

ಅತಿಥಿ ವಕೀಲ ಎಂ.ಕೆ ವಿಜಯ ಕುಮಾರ್ ಮಾತನಾಡಿ, ಇಂದಿನ ಧಾವಂತದ ಬದುಕಿಗೆ ಮಹಾವೀರರ ಮಾರ್ಗದರ್ಶನದ ಚಿಂತನೆ ಅಗತ್ಯವಿದೆ ಎಂದರು.

ಈ ಸಂದರ್ಭದಲ್ಲಿ ಜೈನ್ ಮಿಲನ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಿತು.

ಮಿಲನ್‌ನ ಅಧ್ಯಕ್ಷ ಸುಭಾಶ್ಚಂದ್ರ ಹೆಗ್ಡೆ, ನೂತನ ಅಧ್ಯಕ್ಷ ವಸಂತರಾಜ್, ವಲಯ ನಿರ್ದೇಶಕ ಪಿ.ಅಭಯ ಕುಮಾರ್, ದ.ಕ.ಜಿಲ್ಲಾ ಜೈನ ಯುವಜನ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಬಜಗೋಳಿ, ಜೈನಪುರೋಹಿತ ಸಂಘದ ಅಧ್ಯಕ್ಷ ನಿರ್ವಾಣ ಇಂದ್ರ, ಯುವಮಿಲನ್ ಅಧ್ಯಕ್ಷ ಭರತ್ ಕುಮಾರ್ ಇರ್ವತ್ತೂರು, ಕಾರ್ಯದರ್ಶಿ ಲೋಹಿತ್ ಕುಮಾರ್ ಹಾಗೂ ಯುವಜೈನ್ ಮಿಲನ್‌ನ ಪದಾಧಿಕಾರಿಗಳು ಇದ್ದರು. 

ಮೋಹನ್ ಪಡಿವಾಳ್ ಸ್ವಾಗತಿಸಿದರು. ಅಶ್ವಿನ್ ಕುಮಾರ್, ಉಪನ್ಯಾಸಕಿ ಪ್ರಿಯಕಾರಿಣಿ ಅವರು ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.