ADVERTISEMENT

ಯಕ್ಷ ಶಿಕ್ಷಣದಿಂದ ಮಕ್ಕಳಲ್ಲಿ ಸಂಸ್ಕೃತಿಯ ಅರಿವು

​ಪ್ರಜಾವಾಣಿ ವಾರ್ತೆ
Published 21 ಮೇ 2012, 7:45 IST
Last Updated 21 ಮೇ 2012, 7:45 IST

ಚೇರ್ಕಾಡಿ (ಬ್ರಹ್ಮಾವರ): `ಜಿಲ್ಲೆಯ ಪ್ರೌಢಶಾಲೆಯಲ್ಲಿ  ಕಳೆದ ಮೂರು ವರ್ಷಗಳಿಂದ ಜಾರಿಯಲ್ಲಿರುವ ಯಕ್ಷ ಶಿಕ್ಷಣದಿಂದ ಮಕ್ಕಳಲ್ಲಿ ಆತ್ಮ ವಿಶ್ವಾಸ ಹೆಚ್ಚಿದೆ~ ಎಂದು ಶಾಸಕ ರಘುಪತಿ ಭಟ್ ಹೇಳಿದರು.ಚೇರ್ಕಾಡಿ ಮುಂಡ್ಕಿನಜೆಡ್ಡು ಶಾರದಾ ಪ್ರೌಢಶಾಲೆಯಲ್ಲಿ ಯಕ್ಷ ಮಿತ್ರ ನೂತನ ಸಂಘವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.

ಯಕ್ಷ ಶಿಕ್ಷಣದಿಂದ ಕಲೆ, ಸಂಸ್ಕೃತಿಯ ಅರಿವು ಮಕ್ಕಳಲ್ಲಿ ಮೂಡಿದೆ. ಯಕ್ಷಗಾನ ಕಲೆಯನ್ನು ಕಲಿತು ಮಕ್ಕಳೇ ಇಂತಹ ಒಂದು ಸಂಘವನ್ನು ಕಟ್ಟಿಕೊಳ್ಳುತ್ತಿರುವುದು ಹೆಮ್ಮೆಯ ವಿಷಯ ಎಂದರು.ಚೇರ್ಕಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಮಲಾಕ್ಷ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು.

ಕುಂಜಾಲು ಗ್ರಾ.ಪಂ ಉಪಾಧ್ಯಕ್ಷ ರಾಜು ಕುಲಾಲ, ಪೇತ್ರಿ ಮಡಿಯ ಉದ್ಯಮಿ ರಾಜೀವ ಆಳ್ವ, ಯಕ್ಷಗಾನ ಕಲಾವಿದ ಕೇಶವ ಆಚಾರಿ, ಶಾರದಾ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಎನ್.ದಮಯಂತಿ  ಭಟ್, ಅಧ್ಯಾಪಕ ಮಂಜುನಾಥ ನಾಯ್ಕ ಇದ್ದರು. ಇದೇ ಸಂದರ್ಭದಲ್ಲಿ ಯಕ್ಷಗಾನ ಕಲಾವಿದ ಬಾಳ್ಕಟ್ಟು ರಾಧಾಕೃಷ್ಣ ನಾಯ್ಕ ಅವರನ್ನು ಸನ್ಮಾನಿಸಲಾಯಿತು. ನಂತರ ಮಕ್ಕಳಿಂದ ಶ್ವೇತ ಕುಮಾರ ಚರಿತ್ರೆ, ಮೀನಾಕ್ಷಿ ಕಲ್ಯಾಣ ಯಕ್ಷಗಾನ ನಡೆಯಿತು.

ಯಕ್ಷ ಶಿಕ್ಷಣದಿಂದ ಸ್ಫೂರ್ತಿ
ಪ್ರೌಢಶಾಲಾ ಹಂತದಲ್ಲಿ ಪ್ರತಿ ವರ್ಷ ನಡೆಯುತ್ತಿರುವ ಯಕ್ಷಶಿಕ್ಷಣ ತರಗತಿಯ ಸ್ಫೂರ್ತಿ ಈ ಯಕ್ಷ ಮಿತ್ರ ಕೂಟದ ಸ್ಥಾಪನೆಗೆ ಕಾರಣ. ಸ್ಥಳೀಯ ಶಾಲೆಗಳಲ್ಲಿ ಯಕ್ಷಶಿಕ್ಷಣ ತರಬೇತಿ ಪಡೆದ ಮತ್ತು ಭಾಗವಹಿಸಿದ ಮಕ್ಕಳೇ ಒಟ್ಟುಗೂಡಿ ಇಂತಹ ಸಂಘಟನೆ ಕಟ್ಟಿಕೊಂಡು ಯಕ್ಷಗಾನದ ಉಳಿವಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ.

ಕೇವಲ ಪ್ರೌಢಶಾಲಾ ಹಂತದವರೆಗೆ ಸೀಮಿತವಾಗಿರುವ ಯಕ್ಷಶಿಕ್ಷಣ ಪಿಯುಸಿ ಹಂತದಲ್ಲಿ ಇಲ್ಲದೇ ಇರುವ ಸಂದರ್ಭದಲ್ಲಿ ಮಕ್ಕಳು ಇಂತಹ ಸಂಘಟನೆ ಕಟ್ಟಿಕೊಂಡಿರುವುದು ಜಿಲ್ಲೆಯಲ್ಲಿಯೇ ಪ್ರಥಮ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.