ಕಾರ್ಕಳ: ಯುವಜನತೆ ತಂಬಾಕು ಪದಾರ್ಥಗಳ ಆಕರ್ಷಣೆಗೆ ಒಳಗಾಗದೆ ತಮ್ಮನ್ನು ಹತೋಟಿಯಲ್ಲಿ ಇಟ್ಟುಕೊಂಡು, ಭವಿಷ್ಯದ ಬಗ್ಗೆ ಉತ್ತಮ ಗುರಿ ಹೊಂದಿರಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ತಿಳಿಸಿದರು.
ತಾಲ್ಲೂಕಿನ ಗುಂಡ್ಯಡ್ಕದಲ್ಲಿರುವ ಮಂಜುನಾಥ ಪೈ ಸ್ಮಾರಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಆಯೋಜಿಸಿದ ತಂಬಾಕು ದುಷ್ಪರಿಣಾಮಗಳ ಕುರಿತ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವ ಜನಾಂಗ ಆರೋಗ್ಯವನ್ನು ಕಳೆದುಕೊಂಡು ದೇಶದ ಒಳಿತಿಗೆ ಮಾರಕವಾಗಬಾರದು ಎಂದರು.
ಉಡುಪಿಯ ತಂಬಾಕು ನಿಯಂತ್ರಣ ಘಟಕದ ಸಮಾಜ ಕಾರ್ಯಕರ್ತ ಶೈಲಾ ಶಾನಭೋಗ್ ಮಾತನಾಡಿ, ತಂಬಾಕು ನಿಯಂತ್ರಣ ಕಾಯ್ದೆ ಕುರಿತು ಚಿತ್ರಗಳ ಮೂಲಕ ಮಾಹಿತಿಯನ್ನು ನೀಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀವರ್ಮ ಅಜ್ರಿ.ಎಂ, ‘ನಮ್ಮ ಯುವ ಜನತೆ ವೇಗವಾಗಿ ನಕಾರಾತ್ಮಕ ವಿಷಯಗಳ ಕಡೆ ಆಕರ್ಷಿತರಾಗುವುದು ಹೆಚ್ಚು. ಪ್ರತಿಯಾಗಿ ಉತ್ತಮ ಆಲೋಚನೆಗಳನ್ನು ಬೆಳೆಸಿಕೊಂಡು ಉತ್ತಮ ವಿದ್ಯಾರ್ಥಿಗಳಾಗಬೇಕು. ಇಂತಹ ಜಾಗೃತಿ ಕಾರ್ಯಕ್ರಮಗಳು ಕಾಲೇಜಿನ ವಿದ್ಯಾರ್ಥಿಗಳಿಗೆ ಅತ್ಯಗತ್ಯ. ಸರ್ಕಾರದ ಕಾನೂನಿನ ಪ್ರಕಾರ ಎಲ್ಲ ತಂಬಾಕು ಉತ್ಪನ್ನಗಳ ಮೇಲೆ ಆರೋಗ್ಯಕ್ಕೆ ಹಾನಿಕರ ಎಂದು ನಮೂದಾಗಿರುತ್ತದೆ. ಆದರೆ, ಉಪಯೋಗಿಸುವವರು ಅದರ ಬಗ್ಗೆ ಗಮನ ನೀಡುವುದಿಲ್ಲ. ನಮ್ಮ ಯುವ ಜನತೆ ಈ ಕುರಿತು ತಿಳಿದಿರಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು’ ಎಂದರು.
ಯೋಜನಾಧಿಕಾರಿ ನವೀನ ಉಪಸ್ಥಿತರಿದ್ದರು. ನಿರೀಕ್ಷಾ ಸ್ವಾಗತಿಸಿದರು, ಬಿ.ಎನ್.ಯತಿನ್ ವಂದಿಸಿದರು. ಯೋಜನಾಧಿಕಾರಿ ಯೋಗೇಶ್ ಡಿ.ಎಚ್ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.