ADVERTISEMENT

ಯುವಶಕ್ತಿ ಸದ್ಭಳಕೆಯಲ್ಲಿ ವಿಫಲ: ಕಳವಳ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2011, 10:00 IST
Last Updated 27 ಫೆಬ್ರುವರಿ 2011, 10:00 IST

ಅತ್ತೂರು(ಬಜಗೋಳಿ): ಸಮಾಜದಲ್ಲಿ ನಿರ್ಲಜ್ಜ ಸ್ವಭಾವದ ದುರ್ಗುಣಿಗಳ ಸಂಖ್ಯೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಪ್ರಪಂಚದಲ್ಲಿ ಬೃಹತ್ ಸಂಖ್ಯೆಯ ಯುವ ಜನಾಂಗ ಹೊಂದಿರುವ ನಮ್ಮ ದೇಶ ಯುವಶಕ್ತಿಯನ್ನು ಸದುಪಯೋಗಿಸಲು ವಿಫಲವಾಗಿರುವುದು ದೊಡ್ಡ ದುರಂತ ಎಂದು ಶಾಸಕ ಎಚ್. ಗೋಪಾಲ ಭಂಡಾರಿ ಕಳವಳ ವ್ಯಕ್ತಪಡಿಸಿದರು.

ಕಾರ್ಕಳ ತಾಲ್ಲೂಕಿನ ಅತ್ತೂರು ಗುಂಡ್ಯಡ್ಕದಲ್ಲಿ ವಾಂಟ್ರಾಯಿಪದವು ಜನನಿ ಮಿತ್ರ ಮಂಡಳಿ ದಶಮಾನೋತ್ಸವದ ಅಂಗವಾಗಿ ಇತ್ತೀಚೆಗೆ ನಿರ್ಮಿಸಿಕೊಟ್ಟ ಸ್ಮಶಾನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು. ಯುವಶಕ್ತಿಯನ್ನು ಸಮಾಜಮುಖಿಯಾಗಿ ಪ್ರವಹಿಸುವಂತೆ ಪ್ರೇರೇಪಣೆ ನೀಡಬೇಕು. ಮಾನವೀಯ ಮೌಲ್ಯಗಳಿಗೆ ಒತ್ತು ನೀಡುವ ಸಂಘಟನೆಗಳ ಮುಖಾಂತರ ಈ ಉದ್ದೇಶ ಈಡೇರಿಕೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಅತ್ತೂರು ವಿಷ್ಣುಮೂರ್ತಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀನಿವಾಸ ಭಟ್ ಕಾರ್ಯಕ್ರಮ ಉದ್ಘಾಟಿಸಿದರು. ನಿಟ್ಟೆ ಗ್ರಾ.ಪಂ. ಅಧ್ಯಕ್ಷೆ ಮಾಲತಿ ಕಿಶೋರ್ ಅಧ್ಯಕ್ಷತೆ ವಹಿಸಿದ್ದರು. ಗೋಡಂಬಿ ಉದ್ಯಮಿ ಬೋಳ ಪ್ರಭಾಕರ ಕಾಮತ್, ಉಡುಪಿ ಜಿಲ್ಲಾ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಜಾನ್ ಆರ್. ಡಿಸಿಲ್ವಾ, ಕುಕ್ಕುಂದೂರು ಕೆಎಂಇಎಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ಎಸ್. ಇಮ್ತಿಯಾಜ್ ಅಹ್ಮದ್, ಉದ್ಯಮಿ ನಾಗೇಶ್ ಸುವರ್ಣ, ಬೆಳ್ಮಣ್ ಜಿ.ಪಂ. ಸದಸ್ಯ ಸುಪ್ರೀತ್ ಶೆಟ್ಟಿ, ಗ್ರಾಮಾಭಿವೃದ್ಧಿ ಯೋಜನೆಯ ಪದವು ಒಕ್ಕೂಟದ ಅಧ್ಯಕ್ಷ ಸದಾನಂದ ಕೋಟ್ಯಾನ್, ಮಿತ್ರ ಮಂಡಳಿ ಗೌರವಾಧ್ಯಕ್ಷ ಶ್ರೀಧರ ಸುವರ್ಣ, ಅಧ್ಯಕ್ಷ ದಿವಾಕರ್ ಬಂಗೇರ, ಅನುಸೂಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.