ADVERTISEMENT

ವೈಪರೀತ್ಯ- ಪರಿಹಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 12:20 IST
Last Updated 18 ಜನವರಿ 2011, 12:20 IST

ಉಡುಪಿ: ‘ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳಿಗೆ ನಾವೇ ಹೊಣೆಗಾರರಾಗಿದ್ದು ಈಗ ಅದನ್ನು ಪರಿಹರಿಸುವುದೂ ನಮ್ಮಿಂದಲೇ ಆಗಬೇಕಾಗಿದೆ’ ಎಂದು ಮಣಿಪಾಲ ವಿವಿ ಸಹ ಕುಲಪತಿ ಡಾ.ವಿನೋದ್ ಭಟ್ ಇಲ್ಲಿ ಹೇಳಿದರು.

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್(ಎಂಐಸಿ), ಮಣಿಪಾಲ ವಿವಿ ಮತ್ತು ಬ್ರಿಟಿಷ್ ಕೌನ್ಸಿಲ್ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಹವಾಮಾನ ವೈಪರೀತ್ಯ ಬಗ್ಗೆ ಕಲೆ ಹಾಗೂ ಮಾಧ್ಯಮ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಡಿ ವಿಶ್ವದಲ್ಲೇ ಪರಿಸರ ಬದಲಾಗಿದೆ. ನಮ್ಮ ನಮ್ಮ ದೇಶದಲ್ಲಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಕಳೆದ 50 ವರ್ಷಗಳಲ್ಲಿ ಶೇ.5ರಿಂದ 8ರಷ್ಟು ಮಳೆ ಇಳಿಮುಖವಾಗಿದೆ ಎಂದು ಹೇಳಿದರು.ವಿಶ್ವದಲ್ಲಿ ಜನಸಂಖ್ಯೆಯೂ ಏರುತ್ತಿದ್ದು, 180 ವರ್ಷಗಳಲ್ಲಿ ಅಂದಾಜು 800 ಕೋಟಿ ಜನಸಂಖ್ಯೆ ಏರಿದೆ. ಮುಂದಿನ ನೂರು ವರ್ಷಗಳಲ್ಲಿ 1500 ಕೋಟಿಗೆ ಏರಿಕೆಯಾಗಬಹುದು. ಇಷ್ಟೊಂದು ಜನಸಂಖ್ಯೆ ಏರಿಕೆಯಾ ದರೆ ತಲೆದೋರುವ ಆಹಾರ ಸಮಸ್ಯೆಗೆ ಪರಿಹಾರವಾದರೂ ಹೇಗೆ? ಎಂದು ಅವರು ಪ್ರಶ್ನಿಸಿದರು.

ಎಂಐಸಿ ಗೌರವ ನಿರ್ದೇಶಕ ಹಾಗೂ ಹಿರಿಯ ಪತ್ರಕರ್ತ ಡಾ.ಎಂ.ವಿ. ಕಾಮತ್ ಮಾತನಾಡಿ, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳು ಉಗುಳುವ ಹೊಗೆಯಿಂದ ಮಿತಿ ಮೀರಿದ ಪರಿಸರ ಮಾಲಿನ್ಯ ಉಂಟಾಗಿದೆ. ಅಭಿವೃದ್ಧಿ ಹೆಸರಲ್ಲಿ ಗಿಡ ಮರಕತ್ತರಿಸಿ ಹಾಕಿದ್ದರಿಂದ ಸಕಾಲದಲ್ಲಿ ಮಳೆಯಾಗದೇ ರೈತ ಕಂಗಾಲಾಗಿದ್ದಾನೆ ಎಂದರು.

ಒಂದೆ ಸಮನೆ ಬೆಲೆಏರಿಕೆಯಾಗುತ್ತಿದೆ. ಆದರೆ ಆ ಬಗ್ಗೆ ಯಾವ ಸರ್ಕಾರಗಳೂ ಸೂಕ್ತ ಕ್ರಮ ಕೈಗೊಳ್ಳು  ತ್ತಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆ ಬಡ ಹಾಗೂ ಮಧ್ಯಮ ವರ್ಗ ಜೀವನ ಮಾಡುವುದು ಕಷ್ಟ. ಈ ಬಗ್ಗೆ ಮಾಧ್ಯಮಗಳು ಕೂಡ ಯಾವುದೇ ರೀತಿ ಸ್ಪಂದನೆ ತೋರುತ್ತಿಲ್ಲ ಎಂದರು.ಮೋಟಾರು ಬೋಟ್‌ಗಳ ಮೀನುಗಾರಿಕೆಯಿಂದ ಹಾನಿಯಾಗುತ್ತಿದ್ದು, ಅದನ್ನು ನಿಲ್ಲಿಸಬೇಕು ಎಂದು    ಅವರು ಒತ್ತಾಯಿಸಿದರು.

ಚೆನ್ನೈನ ಬ್ರಿಟಿಷ್ ಕೌನ್ಸಿಲ್‌ನ ಎಂ.ಸೋಲೊಮನ್, ಎಂಐಸಿ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ, ಎಬಿಸಿ ಮಂಗಳೂರು ವಿಭಾಗ ಅಧ್ಯಕ್ಷ ಡಾ.ಕೆ.ಸಿ.ಶೇಟ್ ಪಾಲ್ಗೊಂಡಿದ್ದರು.ಬಿಷ್ಣುದೇವ ಹವಾಲ್ದಾರ್ ಅವರ ‘ಬ್ಲಾಕ್ ಆಫ್ ಗ್ರೀನ್’ ಚಲನಚಿತ್ರ ಪ್ರದರ್ಶಿಸಲಾಯಿತು. ಡಾ.ಸ್ಮಿತಾ ಹೆಗ್ಡೆ,ಡಾ.ಜಯಪ್ಪ, ಡಾ.ಲಕ್ಷ್ಮಣ ಉಪನ್ಯಾಸ ನೀಡಿ   ದರು.ಇದೇ 18, 19ರಂದು ಶಾಲಾ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಕಲಾಪ್ರದರ್ಶನ ಮತ್ತು    ಫೊಟೋಗ್ರಫಿ ವೀಕ್ಷಣೆಗೆ ಲಭ್ಯ,  19ರಂದು ಸಂಜೆ 5ಕ್ಕೆ ಸಮಾರೋಪ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.