ADVERTISEMENT

`ಶಾಸಕರ ರಾಸಲೀಲೆ: ಸತ್ಯ ಬಹಿರಂಗಪಡಿಸಿ'

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 8:46 IST
Last Updated 4 ಏಪ್ರಿಲ್ 2013, 8:46 IST

ಉಡುಪಿ: `ಬಿಜೆಪಿ ಮತ್ತು ಅದರ ಸಹ ಸಂಘಟನೆಗಳ ಸಹಯೋಗದಲ್ಲಿ `ಪ್ರಜಾಪ್ರಭುತ್ವದ ಮಾನ ಉಳಿಸಿ'  ಎಂಬ ಸಂದೇಶದಡಿ ನಡೆದ ಸಮಾವೇಶದೊಂದಿಗೆ, `ರಾಮನ ಆದರ್ಶವನ್ನೂ ಪಾಲಿಸಿ' ಎಂಬ ಆಂದೋಲ ನವೂ ನಡೆಯಲಿ ಎಂದು ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಆಡಿಗ ಲೇವಡಿ ಮಾಡಿದ್ದಾರೆ.

ರಾಜ್ಯದಲ್ಲಿ ಕಳೆದ 5 ವರ್ಷಗಳ ಆಳ್ವಿಕೆಯಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ, ಸಚಿವರು, ಶಾಸಕರ ಆದಿಯಾಗಿ ಪ್ರಜಾಪ್ರಭುತ್ವದ ಮಾನ ಹರಾಜು ಮಾಡಿದವರಾರು? ಮೌಲ್ಯಾಧಾರಿತ ರಾಜಕಾರಣ, ತತ್ವ ಸಿದ್ಧಾಂತದ ಬಗ್ಗೆ ಮಾತನಾಡಿ ಪರಸ್ತ್ರೀಯನ್ನು ಸಹೋದರಿ ಎನ್ನುತ್ತಿದ್ದ ಇವರು ಈಗ ಮಾಡಿರುವ ಘನಕಾರ್ಯವೇನು? ಎಂದು ಅವರು ಪ್ರಶ್ನಿಸಿದ್ದಾರೆ.

ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ಅಧಿಕಾರಕ್ಕಾಗಿ ಒಳಜಗಳ, ಮುಖ್ಯಮಂತ್ರಿ, ಸಚಿವರು ಜೈಲು ಸೇರಿರುವುದು, ಆತ್ಯಾಚಾರ, ಆನಾಚಾರ, ಮಲ್ಪೆಯ ರೇವ್‌ಪಾರ್ಟಿ, ಮಿತ್ರ ದ್ರೋಹ ಪ್ರಕರಣಗಳನ್ನು ಯಾವುದೇ ಪಕ್ಷಗಳಿಗೆ, ಮಠಾದೀಶರಿಗೆ, ಆಥವಾ ಸಂಘ ಪರಿವಾರದ ನಾಯಕರಿಗೆ ಸಮರ್ಥಿಸಿಕೊಳ್ಳಲು ಸಾಧ್ಯವೇ ಎಂದು ಆವರು ಪ್ರಶ್ನಿಸಿದ್ದಾರೆ.

ಯಾವುದೇ ವ್ಯಕ್ತಿಯ ತೇಜೋವಧೆಯನ್ನು ಜೆಡಿಎಸ್ ಖಂಡಿಸುತ್ತದೆ. ಉಡುಪಿ ಶಾಸಕ ರಘುಪತಿ ಭಟ್ಟರ ಬಗ್ಗೆ ನಮಗೆ ಗೌರವ ಇದೆ. ಅವರ ಪತ್ನಿ ಪದ್ಮಪ್ರಿಯ ಸಾವಿನ ಪ್ರಕರಣ ಇಡೀ ರಾಜ್ಯದಲ್ಲಿ ಪ್ರತಿಧ್ವನಿಸಿದರೂ, ಅವರ ವೈಯಕ್ತಿಕ ಸಂಸಾರದ ಬಗ್ಗೆ ಉಡುಪಿ ಜಿಲ್ಲಾ ಜೆಡಿಎಸ್ ಎಂದೂ ಪ್ರತಿರೋಧ ಮಾಡಿರಲಿಲ್ಲ.

ಆದರೆ ಭಟ್ಟರ ಈಗಿನ ರಾಸಲೀಲೆ ಸಿ.ಡಿ ಪ್ರಕರಣದಲ್ಲಿ ಆರೋಪವನ್ನು ಸಮರ್ಥಿಸುವ ಬದಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬೇಕು. ಕೃಷ್ಣನ ನಾಡು ಉಡುಪಿಗೆ ಕಳಂಕವಾಗದಂತೆ, ಪ್ರಜಾತಂತ್ರ ವ್ಯವಸ್ಥೆಯ ಲಕ್ಷ್ಮಣ ರೇಖೆಯನ್ನು ದಾಟಲು ಪ್ರಯತ್ನಿಸಿದವರ ಮತ್ತು ಇದರ ಹಿಂದಿನ ಪಿತೂರಿ ಶಕ್ತಿ ಯಾವುದೇ ಆಗಿರಲಿ ಅವರನ್ನು ಗುರುತಿಸಬೇಕು. ವಾರದೊಳಗೆ ಕಾನೂನಿನ ಚೌಕಟ್ಟಿನಲ್ಲಿ ಕ್ರಮ ಕೈಗೊಂಡು ಸತ್ಯಾಂಶ ಬಯಲಿಗೆಳೆಯಲು ಶಾಸಕರಿಂದ ಮಾತ್ರ ಸಾಧ್ಯ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.