ಕಾರ್ಕಳ:`ವರ್ಷದ ಶೈಕ್ಷಣಿಕ ಕಾರ್ಯಕ್ರಮಗಳು ಪಠ್ಯಪುಸ್ತಕಕ್ಕೆ ಮಾತ್ರ ಸೀಮಿತವಾಗಿರದೆ ನಿತ್ಯ ಜೀವನಕ್ಕೆ ಪೂರಕವಾಗಿರಬೇಕು. ಮಕ್ಕಳ ಸುಪ್ತ ಪ್ರತಿಭೆಗಳನ್ನು ಅಭಿವ್ಯಕ್ತ ಪಡಿಸುವುದರ ಜೊತೆಗೆ ಪ್ರತಿಭೆಯನ್ನು ಒರೆಗೆ ಹಚ್ಚುವ ಶೈಕ್ಷಣಿಕ ಕಾರ್ಯಕ್ರಮ ಸದಾ ಅವಶ್ಯ' ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಅನಿವಾಸಿ ಭಾರತೀಯ ಸಂಘದ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಇಲ್ಲಿ ತಿಳಿಸಿದರು.
ಉಡುಪಿ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಎಸ್.ವಿ.ಎಸ್.ವಿ ಫಂಡ್, ಪ್ರತಿಭಾ ಕಾರಂಜಿ ಸಂಘಟನಾ ಸಮಿತಿ ವತಿಯಿಂದ ಭುವನೇಂದ್ರ ಫ್ರೌಢ ಶಾಲಾ ಸಭಾಂಗಣದಲ್ಲಿ ಮಂಗಳವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಪ್ರತಿಭಾ ಕಾರಂಜಿಯಿಂದ ವಿದ್ಯಾರ್ಥಿಯ ಅಂತಃಸತ್ವ ಜಾಗೃತಿಯಾಗಲಿದೆ' ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಗೋಪಾಲ ಭಂಡಾರಿ ಮಾತನಾಡಿ, `ಕಾರ್ಯಕ್ರಮಗಳು ಮಕ್ಕಳ ಸರ್ವಾಂಗೀಣ ಪ್ರಗತಿಗೆ ಪೂರಕವಾಗಿ ಹಾಗೂ ಸಮಾಜಮುಖಿಯಾಗಿರಬೇಕು' ಎಂದರು.
ವಕೀಲ ಕೆ.ಶಾಂತಾರಾಮ ಕಾಮತ್, ಶಾಲಾ ಸಂಚಾಲಕ ಕೆ.ವಾಮನ ಕಾಮತ್, ಕ್ಷೇತ್ರ ಸಮನ್ವಯ ಅಧಿಕಾರಿ ಶಿವಾನಂದ, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಬಾಬು ಪೂಜಾರಿ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ವಿ,ಕೆ ರಾವ್ ನಂದಳಿಕೆ, ಪ್ರಕಾಶ್ ರಾವ್, ರವೀಂದ್ರ ಹೆಗ್ಡೆ, ಬಿಆರ್ಪಿ ಸತೀಶ್ ರಾವ್ ಉಪಸ್ಥಿತರಿದ್ದರು.
ಬಿಇಒ ರವಿಶಂಕರ್ ರಾವ್ ಸ್ವಾಗತಿಸಿದರು. ಶಿಕ್ಷಣ ಸಂಯೋಜಕಿ ಶೈಲಜಾ ಹೆಗ್ಡೆ ಪ್ರಸ್ತಾವಿಕವಾಗಿ ಮಾತನಾಡಿದರು. ಗಣೇಶ್ ಜಾಲ್ಸೂರು ನಿರೂಪಿಸಿದರು. ಶಾಲಾ ಮುಖ್ಯೋಪಾಧ್ಯಾಯ ಶ್ರೀಧರ ಆಚಾರ್ ವಂದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.