ADVERTISEMENT

ಶಿಸ್ತುಬದ್ಧ ಚುನಾವಣೆ ನಡೆಸಲು ಸಿದ್ಧತೆ

ಕುಂದಾಪುರ: ಚುನಾವಣಾ ಪೂರ್ವಭಾವಿ ಸಭೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 9:11 IST
Last Updated 10 ಏಪ್ರಿಲ್ 2013, 9:11 IST

ಕುಂದಾಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಇದೇ 10ರಿಂದ ಆರಂಭವಾಗಲಿದ್ದು, 17ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರಗಳನ್ನು ಸ್ವೀಕರಿಸ ಲಾಗುವುದು ಎಂದು ಚುನಾವಣಾಧಿಕಾರಿ ಯೋಗೀಶ್ವರ ತಿಳಿಸಿದ್ದಾರೆ.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಚುನಾವಣಾ ಪ್ರಕ್ರಿಯೆ ಹಾಗೂ ಸಿದ್ಧತೆ ಕುರಿತು ಮಾಹಿತಿ ಅವರು ನೀಡಿದರು.
ಮೂವರು ಹಿರಿಯ ಅಧಿಕಾರಿಗಳು ಚುನಾವಣೆಯ ಆಗುಹೋಗುಗಳ ಕುರಿತು ವೀಕ್ಷಕರಾಗಿರುತ್ತಾರೆ. ಹಿರಿಯ ಐಎಫ್‌ಎಸ್ ಅಧಿಕಾರಿ ಚೌಭೆ ಸಾಮಾನ್ಯ ವೀಕ್ಷಕರಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಚುನಾವಣಾ ನೀತಿ ಸಂಹಿತೆ ಪ್ರಕರಣಗಳ ಕುರಿತು ಅವಲೋಕನ ನಡೆಸಲು ಮೂರು ಸಂಚಾರಿ ದಳವನ್ನು ಮಾಡಲಾಗಿದೆ. ಮುದ್ರಣ, ಜಾಹಿರಾತು, ಕಾಸಿಗಾಗಿ ಸುದ್ದಿ ಪ್ರಕಟಣೆಯ ಬಗ್ಗೆ ನಿಗಾ ಇಡಲು ವಿಚಕ್ಷಣಾ ತಂಡವನ್ನು ನೇಮಿಸಲಾಗಿದೆ.

ಈ ಬಾರಿಯ ಚುನಾವಣೆಯಲ್ಲಿ ಕಾಸಿಗಾಗಿ ಸುದ್ದಿ ಪ್ರಕಟಿಸುವುದನ್ನು ಗಂಭೀರ ಅಪರಾಧವಾಗಿ ಪರಿಗಣಿಸಲು ಚುನಾವಣಾ ಆಯೋಗ ತೀರ್ಮಾನಿ ಸಿದ್ದು, ಈ ಕುರಿತು ಈಗಾಗಲೇ ಸಾರ್ವ ಜನಿಕ ಮಾಹಿತಿಗಳನ್ನು ನೀಡಲಾಗಿದೆ. ಜಾಹಿರಾತು ಹಾಗೂ ಜಾಹಿರಾತು ರೂಪದ ಸುದ್ದಿ ಪ್ರಕಟಣೆಯ ಪೂರ್ವದಲ್ಲಿ ಜಿಲ್ಲಾ ಚುನಾವಣಾಧಿ ಕಾರಿಗಳಿಂದ ನಿಗದಿತ ನಮೂನೆಯಲ್ಲಿ ಅನುಮತಿ ಪಡೆದುಕೊಳ್ಳುವುದು ಕಡ್ಡಾಯ ಎಂದು ಹೇಳಿದರು.

ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ 1,81,817 ಹಾಗೂ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ 1,95,316 ಮತದಾರರ ಹೆಸರು ಮತದಾರರ ಪಟ್ಟಿಯಲ್ಲಿ ನೊಂದಣಿ ಯಾಗಿದೆ. ಚುನಾವಣಾ ಕರ್ತವ್ಯದಲ್ಲಿ ಭಾಗಿಯಾಗುವ ಪ್ರತಿಯೊಬ್ಬ ಸಾಮಾನ್ಯ ಸಿಬ್ಬಂದಿ ಹಾಗೂ ಅಧಿಕಾರಿಗಳು ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾ ಗಬೇಕು ಎನ್ನುವ ಉದ್ದೇಶದಿಂದ ಇದೇ 24 ಹಾಗೂ 29ರಂದು ತರಬೇತಿ ಕಾರ್ಯಕ್ರಮ ನಡೆಯಲಿದೆ. ತರಬೇತಿ ಯಲ್ಲಿ ರಾಜಕೀಯ ಪಕ್ಷದ ಪ್ರತಿನಿಧಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಚುನಾವಣಾ ಸಮಯದಲ್ಲಿ ಮತದಾರರಿಗೆ ಆಮೀಷ ಒಡ್ಡುವ, ಹಣ, ಹೆಂಡ ಹಾಗೂ ಇತರ ವಸ್ತುಗಳನ್ನು ಹಂಚುವ ಕುರಿತು ಎಂ.ಸಿ.ಸಿ ತಂಡ ಹಾಗೂ ಫ್ಲೈಯಿಂಗ್ ಸ್ಕ್ವಾಡ್ ವಿಶೇಷ ಗಮನ ಹರಿಸಲಿದೆ. ಚುನಾವಣಾ ನಾಮಪತ್ರ ಸಲ್ಲಿಸಿದ ನಂತರ ಅಭ್ಯರ್ಥಿಗಳು ಮೂರು ಮಾದರಿ ಪುಸ್ತಕಗಳಲ್ಲಿ ವೆಚ್ಚದ ಕುರಿತು ಮಾಹಿತಿ ನೀಡಬೇಕು. ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್ ಖಾತೆಯ ಮೂಲಕ ಚುನಾವಣೆಗೆ ಸಂಬಂಧಿಸಿದ ವ್ಯವಹಾ ರಗಳನ್ನು ನಡೆಸಬೇಕು ಎಂದರು.

ಅಭ್ಯರ್ಥಿಯ ಚುನಾವಣಾ ಕಚೇರಿಯ ಎದುರು 4ಇಂಟು 8  ಅಳತೆಯ ಒಂದು ಬ್ಯಾನರ್ ಹಾಗೂ ಒಂದು ಬಾವುಟ ಹಾಕಲು ಅನುಮತಿ ಇದೆ. ಉಳಿದಂತೆ ಖಾಸಗಿ ಜಾಗ ಹಾಗೂ ಕಟ್ಟಡಗಳು ಸೇರಿ ಎಲ್ಲಿಯೂ ಬ್ಯಾನರ್, ಬಾವುಟ, ಬಂಟಿಂಗ್ಸ್  ಇತ್ಯಾದಿ ಚುನಾವಣಾ ಪ್ರಚಾರ ಸಾಮಗ್ರಿಗಳನ್ನು ಹಾಕಲು ಅನುಮತಿ ಇಲ್ಲ. ಪ್ರಚಾರ ಸಭೆ ನಡೆಯುವುದಕ್ಕಿಂತ ಮೊದಲು ಅನುಮತಿಯನ್ನು ಪಡೆದುಕೊಂಡಲ್ಲಿ ಬ್ಯಾನರ್, ಬಾವುಟ, ಬಂಟಿಂಗ್ಸ್ ಇತ್ಯಾದಿಗಳ ಬಳಕೆಗೆ ಅವಕಾಶ ನೀಡಲಾ ಗುತ್ತದೆ. ಕಾರ್ಯಕ್ರಮ ಮುಗಿದ ಒಂದು ಗಂಟೆಯ ಒಳಗೆ ಇವೆಲ್ಲವನ್ನು ತೆರವುಗೊಳಿಸಬೇಕು ಎಂದರು.

ಕುಂದಾಪುರ ಪೊಲೀಸ್ ಉಪ ವಿಭಾಗದ ಡಿವೈಎಸ್‌ಪಿ ಯಶೋದಾ ಸುನೀಲ್ ಒಂಟಗೋಡಿ ಅವರು ತಾಲ್ಲೂಕಿನ ಎರಡು ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಚುನಾವಣಾ ಅಕ್ರಮಗಳನ್ನು ತಡೆಯಲು ಪೊಲೀಸ್ ಇಲಾಖೆ ಈಗಾಗಲೆ ಕಾರ್ಯ ಪ್ರವೃತ್ತವಾಗಿದೆ ಶಿರೂರು, ತ್ರಾಸಿ, ಮಾಂಡಿ ಮೂರುಕೈ, ಹಾಲ್‌ಕಲ್, ಕಂಡ್ಲೂರು, ಹೊಸಂಗಡಿಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ ತೆರೆಯಲಾಗಿದೆ. ನಕ್ಸಲ್ ಚಟುವಟಿಕೆ ಇರುವ ಪ್ರದೇಶಗಳು ಸೇರಿ ತಾಲ್ಲೂಕಿನ ಅತಿ ಸೂಕ್ಷ್ಮ ಹಾಗೂ ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.

ಬೈಂದೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ಡಾ.ಪ್ರಭು ಲಿಂಗು, ಕುಂದಾಪುರ ತಹಶೀಲ್ದಾರ್ ಗಾಯತ್ರಿ, ಬೈಂದೂರಿನ ಸಹಾಯಕ ಚುನಾವಣಾಧಿಕಾರಿ ಖಾನ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.