ಉಡುಪಿ: ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಉದಯ ಶೆಟ್ಟಿ ಮುನಿಯಾಲು ಅವರಿಗೆ ಕಾರ್ಕಳ ಕ್ಷೇತ್ರದ ಟಿಕೆಟ್ ಕೈತಪ್ಪಲು ಸಂಸದ ಹಾಗೂ ಪಕ್ಷದ ಹಿರಿಯ ಮುಖಂಡ ವೀರಪ್ಪ ಮೊಯಿಲಿ ಅವರೇ ಕಾರಣ ಎಂಬ ಚರ್ಚೆ ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುತ್ತಿದೆ.
ಶೆಟ್ಟಿ ಅವರ ಬೆಂಬಲಿಗರು ಮೊಯಿಲಿ ಅವರ ವಿರುದ್ಧ ತಿರುಗಿ ಬಿದ್ದರೆ, ಅಭಿಮಾನಿಗಳು ಅತಿರೇಕದಿಂದ ವರ್ತಿಸಿ ಹಿರಿಯ ಮುಖಂಡರನ್ನು ನಿಂದಿಸಿದ್ದು ಟಿಕೆಟ್ಗೆ ಎರವಾಯಿತು ಎಂದು ಸಹ ಕೆಲವರು ವಾದಿಸಿದ್ದಾರೆ.
ಚರ್ಚೆ ಜಾತಿ ಆಯಾಮವನ್ನು ಸಹ ಪಡೆದಿದ್ದು, ಬಂಟ ಸಮುದಾಯಕ್ಕೆ ಉಡುಪಿ ಹಾಗೂ ಮೂಲ್ಕಿ, ಮೂಡುಬಿದಿರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್ ತಪ್ಪಿಸಲು ಷಡ್ಯಂತ್ರ ಮಾಡಲಾಗಿದೆ. ಇದರ ಪರಿಣಾಮವನ್ನು ಉಡುಪಿಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಎದುರಿಸಬೇಕಾಗುತ್ತದೆ ಎಂದು ಮುಂಬೈನ ಸುಕುಮಾರ ಶೆಟ್ಟಿ ಎಂಬುವರು ಅಸಮಾಧಾನ ವ್ಯಕ್ತಪಡಿಸಿದ ಸಂದೇಶ ವಾಟ್ಸ್ ಆ್ಯಪ್ನಲ್ಲಿ ಹರಿದಾಡುತ್ತಿದೆ.
ಟಿಕೆಟ್ ಪಡೆದಿರುವ ಗೋಪಾಲ ಭಂಡಾರಿ ಅವರೇ ಉದಯ್ ಅವರಿಗೆ ಬಿ ಫಾರ್ಮ್ ನೀಡುವರು ಎಂದು ಸಹ ಕೆಲವರು ಫೇಸ್ಬುಕ್ನಲ್ಲಿ ಬರೆದಿದ್ದಾರೆ. ಇನ್ನೂ ಮುಂದೆ ಹೋಗಿರುವ ಕೆಲವರು ಮೊಯಿಲಿ ಅವರಿಗೆ ಶ್ರದ್ಧಾಂಜಲಿ ಸಹ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.