ಉಡುಪಿ: ‘ಇಂಗ್ಲಿಷ್ ಸ್ನೇಹಿತ ಇದ್ದಂತೆ, ಮಾತೃ ಭಾಷೆ ರಕ್ತ ಸಂಬಂಧಿಯಂತೆ. ಜಗತ್ತಿನೊಂದಿಗೆ ಸ್ಪರ್ಧಿಸಲು ಆಂಗ್ಲ ಜ್ಞಾನ ಅಗತ್ಯವೇ ಹೊರತು ಅದೇ ಜೀವನವಲ್ಲ’ ಎಂದು ಸಾಹಿತಿ ಡಾ. ಕೆ.ಎಸ್. ನಿಸಾರ್ ಅಹಮದ್ ಅಭಿಪ್ರಾಯ ಪಟ್ಟರು.
ರಂಗಸ್ಥಳ ಸಾಂಸ್ಕೃತಿಕ ಸೇವಾ ಹಾಗೂ ಸಂಶೋಧನಾ ಟ್ರಸ್ಟ್, ಅಮೋಘ ಸಾಂಸ್ಕೃತಿಕ ಮತ್ತು ಸಾಹಿತ್ಯ ಸಂಘಟನೆ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಸನ್ಮಾನ ಹಾಗೂ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲ ಭಾಷೆ ಜ್ಞಾನ ಅನಿವಾರ್ಯವಾಗಿದೆ. ಭಾಷೆಯ ಜ್ಞಾನದ ಕೊರತೆಯಿಂದ ಆನೇಕರು ಉತ್ತಮವಾದ ಅವಕಾಶದಿಂದ ವಂಚಿತರಾಗಿದ್ದಾರೆ. ಇಂಗ್ಲಿಷ್ ಪ್ರತಿಯೊಬ್ಬರು ಕಲಿಯಬೇಕು, ಆದರೆ ಮಾತೃ ಭಾಷೆ ಕನ್ನಡಕ್ಕೆ ಎಲ್ಲಿಯೂ ಧಕ್ಕೆಯಾಗದಂತೆ ಹಾಗೂ ಪಾಶ್ಚತ್ಯ ಸಂಸ್ಕೃತಿಯನ್ನು ಮಾರೂ ಹೋಗದೆ ಮಾತೃ ಭಾಷೆಯನ್ನು ಮತ್ತು ನಿಮ್ಮತನ ಉಳಿಸಿಕೊಳ್ಳಿ ಎಂದರು.
ಆಂಗ್ಲ ಭಾಷೆ ಭಾಷೆ ನಮಗೆ ನಾಗರಿಕತೆಯನ್ನು ಕಲಿಸಿದೆ. ಬ್ರಿಟಿಷರ್ ರಾಜ್ಯಭಾರ ನಡೆಸಿರೋ ಪ್ರತಿಯೊಂದು ದೇಶದ ಪದಗಳನ್ನು ಆಳವಡಿಕೊಂಡು ಆಂಗ್ಲ ಭಾಷೆ ವಿಶ್ವದ್ಯಾಂತ ಹೆಮ್ಮರವಾಗಿ ಬೆಳೆಯುತ್ತಿದ ಎಂದು ತಿಳಿಸಿದರು.
ಇಂದು ಪ್ರತಿಯೊಂದು ಪ್ರದೇಶದಲ್ಲಿ ಕ್ಯಾನ್ಸರ್ ಕಣದಂತೆ ಆಂಗ್ಲ ಮಾಧ್ಯಮ ಶಾಲೆಗಳು ಹುಟ್ಟಿಕೊಳ್ಳುತ್ತಿವೆ. ಆದರೆ ಇದು ಭಾಷೆಯ ಉದ್ಧಾರಕ್ಕಾಗಿ ಅಲ್ಲ ಕೇವಲ ಸ್ವಪ್ರತಿಷ್ಠೆಯ ಹಾಗೂ ಹಣ ವ್ಯಾಮೋಹಕ್ಕಾಗಿ ಎಂದು ಹೇಳಿದರು.
ಎಂ.ಜಿ.ಎಂ ಕಾಲೇಜಿನ ಪ್ರಾಶುಂಪಾಲೆ ಸಂಧ್ಯಾ ನಂಬಿಯಾರ್ ಮಾತನಾಡಿ, ನಿಸಾರ್ ಅಹಮದ್ ಅವರ ಸಾಹಿತ್ಯ ಓದಿದರೆ ನೆಮ್ಮದಿ ಸಿಗುತ್ತದೆ. ಅವರ ಪ್ರತಿಯೊಂದು ಕವನಗಳು ಅವರ ಅನುಭವ ತಿಳಿಸುತ್ತದೆ ಎಂದರು.
ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್ ಬಲ್ಲಾಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕರ್ನಾಟಕ ಕೊಂಕಣಿ ಅಕಾಡೆಮಿ ಅಧ್ಯಕ್ಷ ಆರ್.ಪಿ ನಾಯಕ್, ಅಮೋಘ ಸಾಂಸ್ಕೃತಿಕ ಸಾಹಿತ್ಯಿಕ ಸಂಘಟನೆ ಪೂರ್ಣಿಮಾ, ಮೇಟಿ ಮುದಿಯಪ್ಪ ಉಪಸ್ಥಿತರಿದ್ದರು.
ರಂಗ ಸ್ಥಳ ಸಾಂಸ್ಕೃತ ಸೇವಾ ಸಂಶೋಧನಾ ಟ್ರಸ್ಟ್ ಸಭಾಪತಿ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.