ಬ್ರಹ್ಮಾವರ: ಹಂದಾಡಿ ಬಾರ್ಕೂರು ರಸ್ತೆಯಲ್ಲಿರುವ ಅಪಾಯಕಾರಿ ಮರಗಳ ಕೊಂಬೆ ಮತ್ತು ಮರಗಳನ್ನು ತೆಗೆಯುವ ಬಗ್ಗೆ ಸಾರ್ವಜನಿಕರು ಅನೇಕ ಬಾರಿ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡರೂ ಇದುವರೆಗೆ ಯಾವುದೇ ಪ್ರಯೋಜನಾಗಿಲ್ಲ. ಗ್ರಾಮ ಪಂಚಾಯಿತಿ ಸಭೆಗೂ ಗೈರು ಹಾಜರಾಗಿದ್ದಾರೆ.
-ಇದು ಹಂದಾಡಿ ಗ್ರಾಮಸ್ಥರ ದೂರು. ಇತ್ತೀಚೆಗೆ ನಡೆದ ಹಂದಾಡಿ ಗ್ರಾ.ಪಂ. ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಈ ಬಗ್ಗೆ ಪಂಚಾಯಿತಿಗೂ ಅನೇಕ ಬಾರಿ ಮನವಿ ಮಾಡಿದ್ದೇವೆ. ಸಭೆಗೂ ಆಹ್ವಾನ ನೀಡಲಾಗಿತ್ತು. ಆದರೂ ಅಧಿಕಾರಿಗಳು ನಿರ್ಲಕ್ಷ ತೋರಿದ್ದಾರೆ ಎಂದು ಗ್ರಾಮಸ್ಥರು ದೂರಿದರು.
ಅಲ್ಲಿಯವರೇ ಆದ ಲಕ್ಷ್ಮಿ ಅವರು ಮನೆಯಲ್ಲಿ ಹೆಚ್ಚುವರಿಯಾಗಿ ಯಾವುದೇ ವಿದ್ಯುತ್ ಬಳಸುತ್ತಿಲ್ಲವಾದರೂ ಕೆಲವು ತಿಂಗಳಿಂದ ಸಾವಿರಾರು ರೂಪಾಯಿ ಬಿಲ್ ಬರುತ್ತಿದೆ. ಈ ಬಗ್ಗೆ ಮೆಸ್ಕಾಂಗೆ ದೂರು ನೀಡಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ತಾ.ಪಂ.ಗೆ ಅನುದಾನದ ಹಣದಿಂದ ಅಗತ್ಯವಿರುವ ರಸ್ತೆಗೆ ಬೀದಿ ದೀಪ ಅಳವಡಿಸಲು ಹಣವನ್ನು ಒದಗಿಸಬೇಕು. ಆದರೆ ಬೇರೆ ವಾರ್ಡ್ಗೆ(ಅಗತ್ಯವಿರದ) ಬೀದಿ ದೀಪ ಅಳವಡಿಸಲು ಸದಸ್ಯರು ಏಕೆ ಹಣವನ್ನು ನೀಡುತ್ತಾರೆ ಎಂದು ಪಂಚಾಯಿತಿಯ ಸದಸ್ಯರು ಸಭೆಯಲ್ಲಿ ದೂರಿದರು. ಗ್ರಾ.ಪಂ. ಅಧ್ಯಕ್ಷೆ ಜಯಂತಿ ಪೂಜಾರಿ, ನೋಡಲ್ ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ಶ್ಯಾನುಬಾಗ್, ತಾ.ಪಂ ಸದಸ್ಯೆ ಉಷಾ ಪೂಜಾರಿ, ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಪಿಡಿಒ ಜ್ಯೋತಿಲಕ್ಷ್ಮೀ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.