ADVERTISEMENT

ಹುಲಿ ಯೋಜನೆಯಿಂದ ಹೊರಗೆ: ಹೆಗ್ಡೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2012, 8:10 IST
Last Updated 16 ಜುಲೈ 2012, 8:10 IST

ಮೂಡುಬಿದಿರೆ: `ಪಶ್ಚಿಮ ಘಟ್ಟದ ವ್ಯಾಪ್ತಿಗೆ ಬರುವ ಕಾರ್ಕಳ, ಕುಂದಾಪುರ ಹಾಗೂ ಬೆಳ್ತಂಗಡಿ ತಾಲ್ಲೂಕುಗಳ ಪ್ರದೇಶಗಳನ್ನು ಹುಲಿ ಸಂರಕ್ಷಣಾ ವ್ಯಾಪ್ತಿಗೊಳಪಡಿಸುವ ಪ್ರಸ್ತಾವವನ್ನು ಸರ್ಕಾರ ಈಗಾಗಲೇ ಕೈಬಿಟ್ಟಿದೆ~ ಎಂದು ಸಂಸದ ಸದಸ್ಯ ಜಯಪ್ರಕಾಶ್ ಹೆಗ್ಡೆ ಹೇಳಿದರು.

ಖಾಸಗಿ ಕಾರ‌್ಯಕ್ರಮ ನಿಮಿತ್ತ ಭಾನುವಾರ ಮೂಡುಬಿದಿರೆಗೆ ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾ ಡಿದರು. `ಹುಲಿ ಸಂರಕ್ಷಣಾ ಯೋಜನೆ ಅನುಷ್ಠಾನದಿಂದ ಸರ್ಕಾರ ಹಿಂದೆ ಸರಿದಿರುವುದಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ‌್ಯದರ್ಶಿ ತಮಗೆ ತಿಳಿಸಿದ್ದಾರೆ~ ಎಂದು ಹೇಳಿದರು.

`ಉಡುಪಿ ಜಿಲ್ಲಾಧಿಕಾರಿ ಕೂಡ ಇದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ರಾಜಕೀಯ ಪ್ರಚಾರ ಪಡೆಯಲು ಮಾಜಿ ಶಾಸಕರೊಬ್ಬರು ಈ ಬಗ್ಗೆ ಹೋರಾಟಕ್ಕೆ ಇಳಿದಿದ್ದಾರೆ. ಅವರದ್ದೇ ಪಕ್ಷದ ಸರ್ಕಾರ ಇರುವಾಗ ಒತ್ತಡ ತಂದು ಈ ಯೋಜನೆ ಯನ್ನು ರದ್ದುಪಡಿಸ ಬಹುದಿತ್ತು. ಅದು ಬಿಟ್ಟು ಹೋರಾಟ ನಡೆಸುವ ಎಚ್ಚರಿಕೆ ನೀಡಿ ಜನರನ್ನು ಗೊಂದಲಕ್ಕೀಡು ಮಾಡುವುದು ಸರಿ ಅಲ್ಲ~ ಎಂದರು.

`ಕೇರಳದ ಕಣ್ಣೂರು- ಬೆಂಗಳೂರು ನಡುವೆ ಸಂಚರಿಸುವ ರೈಲಿನ ಕೆಲವು ಬೋಗಿಗಳನ್ನು ಕಾರವಾರಕ್ಕೂ ವಿಸ್ತರಿಸಬೇಕು ಎಂದು ಈಗಾಗಲೇ ಕೇಂದ್ರ ರೈಲ್ವೆ ಸಚಿವಾಲಯಕ್ಕೆ ಪತ್ರ ಬರೆದಿದ್ದೇನೆ~ ಎಂದರು. `ಹಿಂದೆ ಧರ್ಮ ರಾಜಕೀಯದ ಮೂಲಕ ಅಧಿಕಾರ ಪಡೆಯುತ್ತಿದ್ದರೆ ಇಂದು ಜಾತಿ ಬಲದ ಮೂಲಕ ಅಧಿಕಾರ ಗಿಟ್ಟಿಸಿಕೊಳ್ಳಲಾಗುತ್ತಿದೆ.
 
ಹಿಂದೆ ಮುಖ್ಯಮಂತ್ರಿ ವಿರುದ್ಧ ಮಾತನಾಡಿದರೆ ಅಂತಹ ಸಚಿವ, ಶಾಸಕ ಮುಂದಿನ ದಿನ ಮಂತ್ರಿ ಮಂಡಲದಲ್ಲಿ ಇರುತ್ತಿರಲಿಲ್ಲ. ಆದರೆ ಇಂದು ಮುಖ್ಯಮಂತ್ರಿ ವಿರುದ್ಧ ಹೇಳಿಕೆ ಕೊಟ್ಟ ಸಚಿವ ಅಥವಾ ಶಾಸಕರೇ ಬಲಿಷ್ಠರು ಎಂಬಂತಾಗಿದೆ~ ಎಂದು ರಾಜ್ಯ ರಾಜಕೀಯವನ್ನು ಲೇವಡಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.