ADVERTISEMENT

‘ಕಾಂಗ್ರೆಸ್‌ ಪಕ್ಷವಲ್ಲ, ಅದೊಂದು ಜನಪರ ಚಳವಳಿ’

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2014, 11:11 IST
Last Updated 23 ಮಾರ್ಚ್ 2014, 11:11 IST

ಉಡುಪಿ: ‘ಕ್ರಾಂತಿಕಾರಕ ಜನಪರ ಯೋಜನೆಗಳ ಮೂಲಕ ದೇಶವನ್ನು ನಿರ್ಮಾಣ ಮಾಡಿರುವ ಕಾಂಗ್ರೆಸ್‌ ದೇಶದ ಜನರಿಗೆ ಶಕ್ತಿ ತುಂಬಿದೆ. ಕಾಂಗ್ರೆಸ್‌ ಎಂಬುದು ಕೇವಲ ಪಕ್ಷವಲ್ಲ ಅದು ಜನಪರ ಚಳವಳಿ’ ಎಂದು ಸಚಿವ ವಿನಯ ಕುಮಾರ್‌ ಸೊರಕೆ ಹೇಳಿದರು.

ಉದ್ಯಾವರ ಗುಡ್ಡೆಯಂಗಡಿಯಲ್ಲಿ ಇತ್ತೀಚೆಗೆ ನಡೆದ ಉದ್ಯಾವರ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಪಕ್ಷದ ಸಾರ್ವಜನಿಕ ಚುನಾವಣಾ ಪ್ರಚಾರ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ದೇಶಕ್ಕಾಡಿ ದುಡಿದ ಕಾಂಗ್ರೆಸ್ ಪಕ್ಷವನ್ನು ನಿರ್ಮೂಲನೆ ಮಾಡುವುದಾಗಿ ಬಿಜೆಪಿ ಹಗಲು ಕನಸು ಕಾಣುತ್ತಿದೆ. ಗಾಂಧೀಜಿ ಅವರ ಸಿದ್ಧಾಂತಕ್ಕೆ ಬೆನ್ನು ಮಾಡಿದ ಬಿಜೆಪಿ ಗೋಡ್ಸೆ ಸಿದ್ಧಾಂತಕ್ಕೆ ಒತ್ತು ನೀಡುತ್ತಿದೆ. ದ್ವೇಷ ಬಿತ್ತು ಕೆಲಸ ಮಾಡುತ್ತಿರುವ ಪಕ್ಷಕ್ಕೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

ಈ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆ ಅಥವಾ ಸರ್ವಾ­ಧಿಕಾರ ವ್ಯವಸ್ಥೆ ಯಾವುದು ಬೇಕು ಎಂದು ನಿರ್ಧರಿಸುವ ಚುನಾವಣೆ ಇದಾಗಿದೆ ಎಂದರು.

‘ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಂತಿದ್ದು ಇದನ್ನು ಮುನ್ನಡೆಸಬೇಕಾಗಿದೆ ಎಂಬ ಸಾಮಾನ್ಯ ಜ್ಞಾನವೂ ಬಿಜೆಪಿಗೆ ಇಲ್ಲ. ಬಿಜೆಪಿ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಮಾತನಾಡಲಿ. ಕೇವಲ ರಾಜಕೀಯವಾಗಿ ಮಾತನಾಡಿದರೆ ನನ್ನಲ್ಲಿ ಉತ್ತರವಿಲ್ಲ. ಚುನಾವಣೆಗಾಗಿ ರೈತರ, ಜನ ಸಾಮಾ­ನ್ಯರ ಬದುಕಿನಲ್ಲಿ ಬಿಜೆಪಿ ಆಟವಾಡುವುದು ಬೇಡ’ ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದರು.

ದಿವಾಕರ್ ಕುಂದರ್ ಅಧ್ಯಕ್ಷತೆ ವಹಿಸಿದ್ದರು. ಎಂ.ಎ.ಗಪೂರ್, ಗಿರೀಶ್ ಕುಮಾರ್ ಉದ್ಯಾವರ, ಪ್ರವೀಣ್ ಶೆಟ್ಟಿ, ಕೇಶವ ಕೋಟ್ಯಾನ್, ಸುಧೀರ್ ಹೆಗ್ಡೆ, ತಾರಾನಾಥ ಸುವರ್ಣ, ಸುಧಾಕರ ಪೂಜಾರಿ ಮಾರ್ಪಳ್ಳಿ, ಸುನೀಲ್ ಕುಮಾರ್ ಕಪ್ಪೆಟ್ಟು, ಸುನೀಲ್ ಬಂಗೇರಾ, ವಿಶ್ವಾಸ್ ಅಮೀನ್, ಕಿರಣ್ ಕುಮಾರ್ ಉದ್ಯಾವರ, ಅಬ್ದುಲ್ ಅಜೀಜ್ ಹೆಜಮಾಡಿ, ಅಮೃತ್ ಶೆಣೈ, ಕೆ. ಕೃಷ್ಣಮೂರ್ತಿ ಆಚಾರ್ಯ, ಸಂಧ್ಯಾ ಶೆಟ್ಟಿ, ಕುಸುಮ, ದಿನೇಶ್ ಪುತ್ರನ್, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಅಶೋಕ್ ಕೊಡವೂರು, ನರ­ಸಿಂಹಮೂರ್ತಿ, ರಿಯಾಜ್ ಪಳ್ಳಿ, ಮಹಾಬಲ ಕುಂದರ್, ಲಕ್ಷ್ಮೀ ಭಟ್, ವಿಕಾಸ್ ಶೆಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.