ADVERTISEMENT

‘ಜಾಗೃತಿಯಿಂದ ಎಚ್ಐವಿ ನಿಯಂತ್ರಣ’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2013, 9:19 IST
Last Updated 11 ಡಿಸೆಂಬರ್ 2013, 9:19 IST

ಪಡುವರಿ (ಬೈಂದೂರು): ಯಾವುದೇ ವೈದ್ಯಕೀಯ ಪರಿಹಾರವಿಲ್ಲದ ಎಚ್ಐವಿ ಮತ್ತು ಏಡ್ಸ್‌ನ ನಿಯಂತ್ರಣ ಜನರನ್ನು ಆ ನಿಟ್ಟಿನಲ್ಲಿ ಜಾಗೃತಗೊಳಿಸುವುದರಿಂದ ಮಾತ್ರ ಸಾಧ್ಯವಾಗಬಲ್ಲುದು. ಅದಕ್ಕಾಗಿ ಕರಾವಳಿಯಲ್ಲಿ ಜನಪ್ರಿಯವಾಗಿರುವ ಯಕ್ಷಗಾನ ಕಲಾ ಮಾಧ್ಯಮ ಬಳಸುತ್ತಿರುವುದು ಒಂದು ಉತ್ತಮ ಕಾರ್ಯ ಎಂದು ಪಡುವರಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ ಬಟವಾಡಿ ಹೇಳಿದರು.

ರಾಜ್ಯ ಏಡ್ಸ್ ತಡೆ ಸೊಸೈಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪಡುವರಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಿತ್ರ ಮಂಡಳಿ ರಂಗ ಮಂದಿರದಲ್ಲಿ ಇತ್ತೀಚೆಗೆ ನಡೆದ ಯಕ್ಷಗಾನ ಜನ ಜಾಗೃತಿ ಕಾರ್ಯ­ಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರದರ್ಶನ ನೀಡಲಿದ್ದ ತುಮರಿ ಯಕ್ಷ ಬಳಗದ ಸಂಚಾಲಕ ಟಿ.ಎಂ. ಶೇಷಗಿರಿ ಕಲೆ ರಂಜನೆ ನೀಡುವುದರ ಜತೆಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡುತ್ತದೆ ಎಂದು ಹೇಳಿದರು. ಜೀವವಿಮಾ ನಿಗಮದ ಅಭಿವೃದ್ಧಿ ಅಧಿಕಾರಿ ಆರ್. ಸೋಮನಾಥನ್‌ ಎಚ್ಐವಿ ಸೋಂಕು ಕಾಯಿಲೆ ಅಲ್ಲ.  ಆ ರೋಗಿಗಳನ್ನು ಅನ್ಯರು ಮಾನವೀ­ಯ­ತೆಯಿಂದ ಕಾಣಬೇಕು ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜಯಲಕ್ಷ್ಮಿ ದೇವಾಡಿಗ, ಸದಸ್ಯೆ ಮಂಗಲಾ ಟಿ. ಕೆ., ಮಿತ್ರ ಮಂಡಳಿ ಅಧ್ಯಕ್ಷ ದಿನಕರ, ಆರೋಗ್ಯ ಇಲಾಖೆಯ ಮಂಜುಳಾ, ರಾಜಪ್ಪ ಇದ್ದರು. ‘ಸ್ವಾಸ್ಥ್ಯ ಸಂಕ್ರಾಂತಿ’ ಪ್ರಸಂಗದ ಪ್ರದರ್ಶನ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.