ADVERTISEMENT

‘ಪರಿಣತಿ ಸಾಧಿಸಿ ಮೌಲ್ಯ ಉಳಿಸಿ’

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2013, 6:05 IST
Last Updated 4 ಡಿಸೆಂಬರ್ 2013, 6:05 IST

ಉಡುಪಿ: ‘ಇಂದಿನ ಬೆಳವಣಿಗೆಯನ್ನು ಗಮನಿಸಿದರೆ ಭವಿಷ್ಯದಲ್ಲಿ ಉತ್ತಮ ಮತ್ತು ನುರಿತ ವಕೀಲರನ್ನು ಹುಡು­ಕುವ ಸಂದರ್ಭ ಬರಬಹುದು’ ಎಂದು ಹಿರಿಯ ವಕೀಲ ಮಟ್ಟಾರು ರತ್ನಾಕರ ಹೆಗ್ಡೆ ಅಭಿಪ್ರಾಯಪಟ್ಟರು.

ಉಡುಪಿ ವಕೀಲರ ಸಂಘ ಜಿಲ್ಲಾ ನ್ಯಾಯಾ­ಲಯದ ಆವರಣದಲ್ಲಿ ಮಂಗಳವಾರ ಏರ್ಪಡಿಸಿದ್ದ ವಕೀಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಾ ಸ್ಕೂಲ್‌ ಆಫ್‌ ಇಂಡಿಯದಲ್ಲಿ ಅಭ್ಯಾಸ ಮಾಡಿ ಹೊರ ಬರುವ ವಿದ್ಯಾರ್ಥಿಗಳು ನ್ಯಾಯಾ­ಲಯದಲ್ಲಿ ವಕೀಲರಾಗಿ ಕೆಲಸ ಮಾಡುತ್ತಿಲ್ಲ. ಅವರ ಕೋರ್ಸ್‌ ಪೂರ್ಣಗೊಳ್ಳುವ ಮೊದಲೇ ಖಾಸಗಿ ಕಂಪೆನಿಗಳು, ಕಾರ್ಖಾನೆಗಳು ಅವರಿಗೆ ಕೆಲಸಕ್ಕೆ ಆಹ್ವಾನ ನೀಡುತ್ತಿವೆ. ಉತ್ತಮ ಸಂಬಳವನ್ನೂ ಕೊಡ­ಲಾಗುತ್ತದೆ. ಈಗಿರುವ ಒಟ್ಟು ವಕೀಲರಲ್ಲಿ ಶೇ70­ರಷ್ಟು ಮಂದಿ ನ್ಯಾಯಾಲಯದಿಂದ ಹೊರಗೆ ವೃತ್ತಿ ನಡೆ­ಸುತ್ತಿದ್ದರೆ, ಶೇ 30ರಷ್ಟು ಮಂದಿ ಮಾತ್ರ ನ್ಯಾ­ಯಾ­ಲಯದ ಒಳಗೆ ವಕೀಲಿ ಮಾಡುತ್ತಿದ್ದಾರೆ ಎಂದರು.

ಜನರು ನ್ಯಾಯಾಂಗದ ಮೇಲೆ ಇನ್ನೂ ನಂಬಿಕೆ ಉಳಿಸಿಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ವೃತ್ತಿ ಪರಿಣತಿ ಸಾಧಿಸಬೇಕು, ಮೌಲ್ಯಗಳನ್ನು ಉಳಿಸಿಕೊಂಡು ಕೆಲಸ ನಿರ್ವಹಿಸಬೇಕು ಎಂದು ಅವರು ಕಿವಿ ಮಾತು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಉಡುಪಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ಎಂ. ಅಂಗಡಿ ಅವರು, ನ್ಯಾಯಾಧೀಶರಾಗಿ ಆಯ್ಕೆಯಾಗಿರುವ ಉಡುಪಿ ವಕೀಲರ ಸಂಘದ ಸದಸ್ಯರಾದ ಮಧುಕರ್‌ ಭಾಗವತ್‌, ಶ್ರೀಕಾಂತ್‌ ಹೆಬ್ಬಾರ್‌, ಎಸ್‌. ಶರತನ್‌ ಮತ್ತು ಕೆ. ಲತಾ ಅವರನ್ನು ಸನ್ಮಾನಿಸಿದರು. ನಿವೃತ್ತ ವಕೀಲ ಎಂ.ಎಸ್. ಮಯ್ಯ ಅವರನ್ನು ಸನ್ಮಾನಿಸಿದರು. ಹಿರಿಯ ವಕೀಲ ಶ್ರೀಪತಿ ಆಚಾರ್ಯ, ಹಿರಿಯ ವಕೀಲರಾದ ಎನ್‌. ಗೀತಾ ಕೌಶಿಕ್‌, ವಕೀಲರ ಸಂಘದ ಕಾರ್ಯ­ದರ್ಶಿ ದೇವದಾಸ್‌ ವಿ ಶೆಟ್ಟಿಗಾರ್‌ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಕೆ. ಗಣೇಶ್‌ ಕುಮಾರ್‌ ಸ್ವಾಗತಿಸಿದರು. ಕವಿತಾ ಪ್ರಾರ್ಥನೆ ಮಾಡಿದರು. ಅಖಿಲ್‌ ಬಿ. ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.