ADVERTISEMENT

‘ಮೌಲ್ಯಾಧಾರಿತ ಶಿಕ್ಷಣ ಅಗತ್ಯ’

ಪದವಿ ಪೂರ್ವ ಸಮಾಜಶಾಸ್ತ್ರ ಉಪನ್ಯಾಸಕರ ಕಾರ್ಯಾಗಾರ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2013, 9:06 IST
Last Updated 13 ಡಿಸೆಂಬರ್ 2013, 9:06 IST

ಬ್ರಹ್ಮಾವರ: ವಿದ್ಯಾರ್ಥಿಗಳಿಗೆ ಸಮಾಜದ ಬಗ್ಗೆ ಅರಿವು ಮೂಡಿಸುವಂತಹ ಕಾರ್ಯ ಸಮಾಜಶಾಸ್ತ್ರ ಉಪನ್ಯಾಸಕರಿಂದ ಆಗಬೇಕಾಗಿದೆ. ಇಂದಿನ ವಿದ್ಯಾರ್ಥಿಗಳಿಗೆ ಜ್ಞಾನಕ್ಕಿಂತ ಮೌಲ್ಯಾಧಾರಿತ ಶಿಕ್ಷಣದ ಅಗತ್ಯವಿದೆ ಎಂದು ಮಂಗಳೂರು ಸಂತ ಅಲೋಷಿಯಸ್‌ ಕಾಲೇಜಿನ ನಿವೃತ್ತ ಉಪನ್ಯಾಸಕ ಡಾ.ರಿಚರ್ಡ್‌ ಪಾಯಸ್‌ ಸಲಹೆ ನೀಡಿದರು.

ಬ್ರಹ್ಮಾವರದ ಎಸ್.ಎಂ.ಎಸ್ ಪದವಿಪೂರ್ವ ಕಾಲೇಜಿನಲ್ಲಿ ಬುಧವಾರ ಉಡುಪಿ ಜಿಲ್ಲಾ ಪದವಿ ಪೂರ್ವ ಸಮಾಜಶಾಸ್ತ್ರ ಉಪನ್ಯಾಸಕರಿಗೆ ಉಡುಪಿ ಜಿಲ್ಲಾ ಪದವಿಪೂರ್ವ ಸಮಾಜಶಾಸ್ತ್ರ ಉಪನ್ಯಾಸಕರ ಸಂಘ ಹಾಗೂ ಮಂಗಳೂರು ಸಮಾಜಶಾಸ್ತ್ರ ಸಂಘದ ಸಹಯೋಗದಲ್ಲಿ ನಡೆದ ವಿಷಯಾ ಧಾರಿತ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತರಗತಿಯ ಬೋಧನೆಗಿಂತ ಹೊರಗಡೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಅಲ್ಲಿಯ ವಿಷಯಗಳನ್ನು ತಿಳಿಸುವು ದರಿಂದ ವಿದ್ಯೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸುವುದರೊಂದಿಗೆ ಅವರಲ್ಲಿ ಪರಿಣಾಮಗಾರಿ ಬದಲಾವಣೆ  ನೋಡಲು ಸಾಧ್ಯ ಎಂದ ಅವರು ಭಾರತದಲ್ಲಿ 1ವರ್ಷಕ್ಕೆ ಸುಮಾರು 5ಸಾವಿರ ವಿದ್ಯಾರ್ಥಿಗಳು ಪರೀಕ್ಷೆಯ ಭಯ ಮತ್ತು ಇನ್ನಿತರ ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನ ನೀಡಿದಲ್ಲಿ ಇಂತಹ ಪ್ರಸಂಗಗಳಿಂದ ವಿದ್ಯಾರ್ಥಿ ದೂರವಿದ್ದು, ವಿದ್ಯಾರ್ಥಿ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಲು ಸಾಧ್ಯ ಎಂದರು. ಉಡುಪಿ ಜಿಲ್ಲಾ ಪದವಿಪೂರ್ವ ಸಮಾಜಶಾಸ್ತ್ರ ಉಪನ್ಯಾ ಸಕರ ಸಂಘದ ಅಧ್ಯಕ್ಷ ಸುದರ್ಶನ ಅಧ್ಯಕ್ಷತೆ ವಹಿಸಿದ್ದರು.

ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಎಸ್‌.ನರೋನ್ಹಾ ಮಂಗಳೂರು ಸಮಾಜಶಾಸ್ತ್ರ ಸಂಘದ ಹೊರತಂದ ಸಮಾಜಶೋಧನೆ ಪುಸ್ತಕ ಮತ್ತು ಡಾ.ರಿಚರ್ಡ್‌ ಪಾಯಸ್‌ ಸಮಾಜಶಾಸ್ತ್ರ ಸಂಘ ಹೊರತಂದ ಪ್ರಥಮ ಪಿ.ಯು.ಸಿ ಸಮಾಜಶಾಸ್ತ್ರ ಪಠ್ಯಪುಸ್ತಕವನ್ನು ಬಿಡುಗಡೆ ಮಾಡಿದರು.

ಕಟಪಾಡಿ ಎಸ್‌.ವಿ.ಎಸ್‌ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಲಕ್ಷ್ಮೀ ಬಾಯಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾ ಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಎಸ್‌.ಎಂ.ಎಸ್‌ ಕಾಲೇಜಿನ ಉಪನ್ಯಾಸಕ ಡಾ.ವೈ.ರವೀಂದ್ರನಾಥ ರಾವ್‌ ಸಮಾಜಶಾಸ್ತ್ರ ಸಂಶೋಧನೆ ಮತ್ತು ಶಿರ್ವ ಸೈಂಟ್‌ ಮೇರಿಸ್‌ ಕಾಲೇಜಿನ ಪ್ರಾಧ್ಯಾಪಕ ಡಾ.ವಿನಯ್‌ರಾಜ್‌ ಸಮಾಜ ಹಾಗೂ ಪರಿಸರ ವಿಷಯಗಳ ಬಗ್ಗೆ ಮಾತನಾಡಿದರು.

ಕೋಟ ವಿವೇಕ ಪಿಯು ಕಾಲೇಜಿನ ಉಪನ್ಯಾಸಕ ಅಶೋಕ್‌ ಶೆಟ್ಟಿ ಸನ್ಮಾನಿತರ ಪರಿಚಯ ಮಾಡಿದರು. ಕೊಕ್ಕರ್ಣೆ ಸರ್ಕಾರಿ ಪಿಯು ಕಾಲೇಜಿನ ಉಪನ್ಯಾಸಕ ರಾಘವೇಂದ್ರ ಅಡಿಗ ಸ್ವಾಗತಿಸಿದರು.  ಉಪನ್ಯಾಸಕ ವಿಜಯ್‌ ಆಳ್ವ ವಂದಿಸಿದರು.  ಅಧ್ಯಾಪಕ ಪ್ರಕಾಶ್‌ ಕುಂದರ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT