ADVERTISEMENT

‘ಸಮಸ್ಯೆಗಳ ಪರಿಹಾರಕ್ಕೆ ಜಯಪ್ರಕಾಶ್ ಹೆಗ್ಡೆ ವಿಫಲ’

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2014, 8:43 IST
Last Updated 26 ಮಾರ್ಚ್ 2014, 8:43 IST

ನರಸಿಂಹರಾಜಪುರ: ಎರಡು ವರ್ಷಗಳ ಕಾಲ ಸಂಸದ­ ರಾಗಿದ್ದ ಜಯ­ ಪ್ರಕಾಶ್ ಹೆಗ್ಡೆ  ಅವರು ಕ್ಷೇತ್ರದ  ಜ್ವಲಂತ ಸಮಸ್ಯೆ­ ಗಳಿಗೆ ಸ್ಪಂದಿಸಿಲ್ಲ  ಹಾಗೂ ಇಲ್ಲಿನ  ಸಮಸ್ಯೆಗಳ ಬಗ್ಗೆ  ಸಂಸತ್ ನಲ್ಲಿ ಒಂದೇ ಒಂದು ಪ್ರಶ್ನೆ ಯನ್ನು ಕೇಳಿಲ್ಲ ಎಂದು ಬಿಜೆಪಿ ಜಿಲ್ಲಾ ಕಾರ್ಯ­ದರ್ಶಿ ವಿ.­ನಿಲೇಶ್ ಆರೋಪಿ­ಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಅವರು ಮಾತನಾಡಿದರು. ಶೃಂಗೇರಿ ಕ್ಷೇತ್ರ ಹಾಗೂ ತಾಲ್ಲೂಕು ವ್ಯಾಪ್ತಿಯಲ್ಲಿ ಅಡಿಕೆಬೆಳೆಗಾರರ, ಕಸ್ತೂರಿರಂಗನ್ ವರದಿಯ ಹಾಗೂ ಒತ್ತುವರಿಯ ಸಮಸ್ಯೆಯಿದೆ. ಕಳೆದ 10 ವರ್ಷಗಳ ಕಾಲ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ, ಒಂದು ವರ್ಷಗಳಿಂದ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಜರಿದರು. ಕಸ್ತೂರಿ ರಂಗನ್ ವರದಿ ಜಾರಿಗೊಳಿಸಲು ಬಿಡುವುದಿಲ್ಲ ಎಂದು ಹೇಳಿಕೆ ನೀಡಿದ ಕಾಂಗ್ರೆಸ್ ಇದಕ್ಕೆ ಅಧಿಸೂಚನೆ ಹೊರಡಿಸುವುದರ ಮೂಲಕ ಜನರಿಗೆ ಕಣ್ಣು ಒರೆಸುವ ತಂತ್ರ ಅನುಸರಿಸಿದ್ದಾರೆ ಎಂದರು.

ಕಸ್ತೂರಿ ರಂಗನ್ ವರದಿ ಅಧಿಸೂಚನೆ ಹೊರಡಿಸಿರುವುದು ಮಲೆನಾಡಿನ ಭಾಗದ ರೈತರಿಗೆ ಕರಾಳ ದಿನವಾಗಿದೆ.

ಒತ್ತುವರಿ ಸಮಸ್ಯೆಗೆ ಸಂಬಂಧಿಸಿದಂತೆ ಬಿಜೆಪಿ ಅಧಿಕಾರದಲ್ಲಿರುವವರೆಗೆ ಯಾವುದೇ ಒತ್ತುವರಿದಾರರ ಮೇಲೆ ಮೊಕದ್ದಮೆ ದಾಖಲಿಸಿಲ್ಲ. ಒತ್ತುವರಿ ತೆರವುಗೊಳಿಸಲು ಬಿಟ್ಟಿಲ್ಲ. ಆದರೆ ಕಾಂಗ್ರೆಸ್ ಸರ್ಕಾರ ಒತ್ತುವರಿದಾರರಿಗೆ ನೋಟಿಸ್ ಜಾರಿಗೊಳಿಸಿದೆ ಹಾಗೂ ಒತ್ತುವರಿ ತೆರವುಗೊಳಿಸುತ್ತಿದೆ ಎಂದು ಆರೋಪಿಸಿದರು.

ಕಳೆದ ಲೋಕಸಭಾ ಉಪ ­ಚುನಾವಣೆ ವೇಳೆಯಲ್ಲಿ ಗೋರಕ್‌ ಸಿಂಗ್ ವರದಿ ಜಾರಿಗೊಳಿಸಿ ಅಡಿಕೆ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡುವ ಬಗ್ಗೆ ಭರವಸೆ ನೀಡಿದ್ದ ಕಾಂಗ್ರೆಸ್ ಮುಖಂಡರು ಅದನ್ನು ಇದುವರೆಗೂ ಅನುಷ್ಠಾನಕ್ಕೆ ತರದೆ ರೈತರಿಗೆ ವಂಚಿಸಿದ್ದಾರೆ ಎಂದು ಜರಿದರು.

ಇದುವರೆಗೂ ಕಳೆದ ಚುನಾ­ವಣೆಯಲ್ಲಿ ನೀಡಿದ ಭರವಸೆ ಈಡೇರಿಸದ, ರೈತರ ಬಗ್ಗೆ ಒಳ್ಳೆಯ ನಿಲುವು ತೆಗೆದುಕೊಳ್ಳದವರು ಪುನಃ ಕಾಂಗ್ರೆಸ್ ಅಭ್ಯರ್ಥಿಯಾಗಿ ದ್ದಾರೆ. ಇದರಿಂದ ಬೇಸತ್ತ ಈ ಭಾಗದ ಜನರು ಬಿಜೆಪಿಯತ್ತ ಮುಖ ಮಾಡಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಶೋಭಾ ಕರದ್ಲಾಂಜೆ ಸಚಿವರಾಗಿದ್ದಾಗ ರೈತರ ಹಲವಾರು ಸಮಸ್ಯೆಗಳನ್ನು ಬಗೆಹರಿಸಿ­ದ್ದಾರೆ. ರೈತರಿಗೆ ಮಾರಕವಾದ ಎಂಡೋ ಸಲ್ಫಾನ್ ನಿಷೇಧ ಮಾಡು­ವುದರಲ್ಲಿ ಪ್ರಮುಖ ಪಾತ್ರ­ವಹಿಸಿದ್ದಾರೆ. ಇಂಧನ ಸಚಿವ­ರಾಗಿದ್ದಾಗ ಬರಗಾಲದಲ್ಲೂ ವಿದ್ಯುತ್ ಕೊರತೆಯಾಗದ ರೀತಿ ಯೋಜನೆ ರೂಪಿಸಿದ್ದರು. ಇವರು ಚುನಾ­ವಣೆಯಲ್ಲಿ ಜಯಗಳಿಸುವುದು ನಿಶ್ಚಿತ ಎಂದರು.

ಜೆಡಿಎಸ್ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೊಂದಿಗೆ ಒಳ ಒಪ್ಪಂದ ಮಾಡಿಕೊಂಡಿತ್ತು ಎಂದು ದೂರಿದರು.ಅದರಂತೆ ಈಚೆಗೆ ಇಲ್ಲಿನ ಪಟ್ಟಣ ಪಂಚಾಯಿತಿ ಅಧ್ಯಕ್ಷರ ಚುನಾವಣೆಯಲ್ಲಿ ಕಾಂಗ್ರೆಸ್ ಗೆ ಬೆಂಬಲಿಸಿರುವುದು ಸಾಕ್ಷಿಯಾಗಿದೆ ಎಂದರು. ಕಾಂಗ್ರೆಸ್ ಆಮಿಷಕ್ಕೆ ಒಳಗಾಗಿ ಬಿಜೆಪಿಯು ಪ.ಪಂ ಅಧ್ಯಕ್ಷರ ಚುನಾ­ವಣೆಗೆ ಸ್ಪರ್ಧಿಸಿಲ್ಲ ಎಂಬ ಆರೋಪ­ವಿದೆಯಲ್ಲ ಎಂದು ಪ್ರಶ್ನಿಸಿದಾಗ ಪಕ್ಷದ ತೀರ್ಮಾನದಂತೆ ಸ್ಪರ್ಧಿಸಿಲ್ಲ ಎಂದು ಉತ್ತರಿಸಿದರು.
ಬಿಜೆಪಿ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಗೋಪಾಲ್, ನಗರ ಘಟಕದ ಅಧ್ಯಕ್ಷ ಜಯರಾಮ್, ಕಸಬಾ ಹೋಬಳಿ ಘಟಕದ ಅಧ್ಯಕ್ಷ ಕೆಸವೆ ಮಂಜುನಾಥ್, ಜಿಲ್ಲಾ ಸಮಿತಿ ಸದಸ್ಯ ಜಿ.ಎಂ.ಪ್ರಕಾಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.