ADVERTISEMENT

ಠೇವಣಿ ಕಳೆದುಕೊಂಡ 10 ಅಭ್ಯರ್ಥಿಗಳು

7510 ನೋಟಾ ಚಲಾವಣೆಪ; 611 ಮತಗಳು ತಿರಸ್ಕೃತ

​ಪ್ರಜಾವಾಣಿ ವಾರ್ತೆ
Published 24 ಮೇ 2019, 20:32 IST
Last Updated 24 ಮೇ 2019, 20:32 IST

ಉಡುಪಿ: ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹೊರತುಪಡಿಸಿ ಉಳಿದವರ ಸಾಧನೆ ಅಷ್ಟಕಷ್ಟೆ.

ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳ ಪೈಕಿ ಬಿಜೆಪಿ, ಮೈತ್ರಿ ಅಭ್ಯರ್ಥಿ ಪಡೆದ ಒಟ್ಟು ಮತ10,88,233. ಉಳಿದ 10 ಅಭ್ಯರ್ಥಿಗಳು ಒಟ್ಟಾಗಿ ಪಡೆದ ಮತ 55,269.

ಠೇವಣಿ ಕಳೆದುಕೊಂಡವರು:

ADVERTISEMENT

ಬಿಜೆಪಿ ಹಾಗೂ ಜೆಡಿಎಸ್‌ ಅಭ್ಯರ್ಥಿಯನ್ನು ಹೊರತುಪಡಿಸಿ ಉಳಿದ 10 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಚುನಾವಣಾ ಆಯೋಗದ ನಿಯಮಗಳ ಪ್ರಕಾರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ಚಲಾವಣೆಯಾದ ಮತಗಳ ಪೈಕಿ ಕನಿಷ್ಠ 6‌/1 ಭಾಗ ಮತಗಳನ್ನು ಪಡೆಯಬೇಕು.

ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮತಗಳು 11,43,502 (ನೋಟಾ, ತಿರಸ್ಕೃತ ಮತ ಬಿಟ್ಟು). ಇದರಲ್ಲಿ ಶೇ 16.67ರಷ್ಟು ಮತಗಳನ್ನು ಪಡೆದವರು ಮಾತ್ರ ಠೇವಣಿ ಉಳಿಸಿಕೊಳ್ಳಬಹುದು. ಪ್ರಮೋದ್ ಅವರನ್ನು ಬಿಟ್ಟು, ಯಾರೂ ಠೇವಣಿ ಉಳಿಸಿಕೊಳ್ಳುವಷ್ಟು ಮತಗಳನ್ನು ಪಡೆದುಕೊಂಡಿಲ್ಲ.

ಮೂರನೇ ಸ್ಥಾನ ಪಡೆದ ಬಿಎಸ್‌ಪಿ:

ಬಿಎಸ್‌ಪಿಯ ಪಿ.ಪರಮೇಶ್ವರ 15,947 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರೆ, ಪಕ್ಷೇತ್ತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ 7,981 ಮತಗಳನ್ನು ಪಡೆದುಕೊಂಡಿದ್ದಾರೆ.

ಪಿ.ಗೌತಮ್ ಪ್ರಭು (7,431), ಅಬ್ದುಲ್ ರೆಹಮಾನ್ (6,017), ಕೆ.ಸಿ.ಪ್ರಕಾಶ್ (3,543), ಎಂ.ಕೆ.ದಯಾನಂದ (3,539), ಮಗ್ಗಲಮಕ್ಕಿ ಗಣೇಶ (3,526), ಸುರೇಶ್ ಕುಂದರ್ (3,488), ಕಾಮ್ರೆಡ್ ವಿಜಯ್ ಕುಮಾರ್ (2,216), ಶೇಖರ್ ಹಾವಂಜೆ (1,581) ಮತಗಳನ್ನು ಪಡೆದು ಕ್ರಮವಾಗಿ ಸ್ಥಾನ ಹಂಚಿಕೊಂಡಿದ್ದಾರೆ.

7,510 ನೋಟಾ:

ಕಣದಲ್ಲಿರುವ ಯಾವ ಅಭ್ಯರ್ಥಿಗಳಿಗೂ ಮತ ಹಾಕಲು ಇಷ್ಟವಿಲ್ಲದಿದ್ದರೆ ನೋಟಾ (ಮೇಲಿನ ಯಾರೂ ಅಲ್ಲ) ಚಲಾಯಿಸುವ ಹಕ್ಕನ್ನು ಚುನಾವಣಾ ಆಯೋಗ ಮತದಾರರಿಗೆ ನೀಡಿತ್ತು. ಅದರಂತೆ ಒಟ್ಟು 7,510 ನೋಟಾ ಚಲಾವಣೆಯಾಗಿದೆ. ಕುಂದಾಪುರದಲ್ಲಿ ಅತಿ ಹೆಚ್ಚು 1258 ನೋಟಾ ಬಿದ್ದರೆ, ಮೂಡಿಗೆರೆ 1059, ಚಿಕ್ಕಮಗಳೂರು 960, ಉಡುಪಿ 930, ಕಾರ್ಕಳ 873, ಶೃಂಗೇರಿ 853, ತರೀಕೆರೆ 809, ಕಾಪು 760 ನೋಟಾ ಚಲಾವಣೆಯಾಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ 7,828 ನೋಟಾ ಚಲಾವಣೆಯಾಗಿತ್ತು. ಈ ಬಾರಿ ಪ್ರಮಾಣ ಸ್ವಲ್ಪ ಇಳಿಕೆಯಾಗಿದೆ.

ತಿರಸ್ಕೃತ 611:

ಒಟ್ಟು ಸ್ವೀಕೃತಗೊಂಡಿದ್ದ 2,492 ಅಂಚೆಮತಗಳಲ್ಲಿ, ಸಿಂಧುವಾಗಿದ್ದ ಅಂಚೆಮತಗಳು 1,881 ಮಾತ್ರ. ಉಳಿದ611 ಅಂಚೆ ಮತಗಳು ತಿರಸ್ಕೃತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.