ADVERTISEMENT

ಕಡಲ ಕಿನಾರೆ ರಂಗೇರಿಸಿದ ಉತ್ಸವ

​ಪ್ರಜಾವಾಣಿ ವಾರ್ತೆ
Published 23 ಜನವರಿ 2018, 7:05 IST
Last Updated 23 ಜನವರಿ 2018, 7:05 IST
ಹಿರಿಯರು ಸ್ಪರ್ಧೆಗಾಗಿ ಹಗ್ಗ ಎಳೆಯುವ ಮೂಲಕ ಗಮನ ಸೆಳೆದರು.
ಹಿರಿಯರು ಸ್ಪರ್ಧೆಗಾಗಿ ಹಗ್ಗ ಎಳೆಯುವ ಮೂಲಕ ಗಮನ ಸೆಳೆದರು.   

ಕುಂದಾಪುರ: ಬಲೆ ಬೀಸಿ ಮೀನು ಹಿಡಿಯುವ ಶೃಮ ಜೀವಿ ಮೀನುಗಾರರ ಬಲೆ ಎಳೆಯುವ ಕೂಗು, ಎತ್ತರದ ನೀಲಿ ಬಾನಿನಲ್ಲಿ ಬಣ್ಣದ ಚಿತ್ತಾರವನ್ನು ಬಿಡಿಸುತ್ತಿರುವ ಗಾಳಿ ಪಟಗಳು, ನೋಡುಗರ ಮನವನ್ನು ಸೆಳೆಯುತ್ತಿರುವ ಮರಳು ಶಿಲ್ಪಗಳು, ಗಮಗಮಿಸುವ ಮೀನು ಖಾದ್ಯಗಳು, ಹಗ್ಗ ಜಗ್ಗಾಟಕ್ಕಾಗಿ ವಯಸ್ಸನ್ನು ಮರೆತು ಟೊಂಕ ಕಟ್ಟಿ ನಿಂತ ಹಿರಿಯರು..

ಕೆಲವು ದಿನಗಳ ಹಿಂದೆಯಷ್ಟೇ ಬೀಜಾಡಿ ಸಮೀಪದ ಅರಬ್ಬಿಯ ಕಡಲ ಕಿನಾರೆಯಲ್ಲಿ ನಡೆದಿದ್ದ ಬೀಚ್‌ ಉತ್ಸವದ ನೆನಪುಗಳು ಮಸಕಾಗುವ ಮೊದಲೇ ಕರಾವಳಿಯ ಇನ್ನೊಂದು ಪ್ರಸಿದ್ಧ ಕಡಲ ಕಿನಾರೆ ಕೋಡಿಯ ಸಮುದ್ರದ ಕಡಲು ಭಾನುವಾರ ಇನ್ನೊಂದು ಹಬ್ಬದ ವಾತಾವರಣಕ್ಕೆ ಕಾರಣವಾಗಿತ್ತು. ಇದಕ್ಕೆ ಅವಕಾಶ ಮಾಡಿಕೊಟ್ಟವರು ಬಿಜೆಪಿಯ ಮೀನುಗಾರ ಪ್ರಕೋಷ್ಠದ ಸಂಘಟನೆಯ ಸದಸ್ಯರು.

ಕಡಲ ಪರಂಪರೆಯನ್ನು ನೆನಪಿಸಬೇಕು ಎನ್ನುವ ಮೇಲ್ನೋಟದ ಉದ್ದೇಶವಾಗಿದ್ದರೂ, ಚುನಾವಣೆಯ ಪರ್ವ ಕಾಲದಲ್ಲಿ ಏಕಾಏಕಿ ಕಾಣಿಸಿಕೊಂಡ ಈ ವೈಭದ ಹಬ್ಬದ ಹಿಂದಿರುವ ರಾಜಕೀಯ ಉದ್ದೇಶಗಳು ಗುಟ್ಟಾಗಿ ಉಳಿಯಲಿಲ್ಲ. ಕರಾವಳಿ ಭಾಗದ ಜನರ ಹಕ್ಕೋತ್ತಾಯ, ಸಿಆರ್‌ಝಡ್‌ ಸಮಸ್ಯೆ ಪರಿಹಾರಕ್ಕೆ ಆಗ್ರಹ, ಪ್ರವಾಸೋದ್ಯಮ ಬಲಪಡಿಸುವ ಕುರಿತು ಚಿಂತನೆಗಳು ಸೇರಿ ಹಲವು ಜನಪರ ಚಿಂತನೆ ಹಾಗೂ ಚರ್ಚೆಗೆ ಈ ಕಾರ್ಯಕ್ರಮ ವೇದಿಕೆಯಾಯಿತು.

ADVERTISEMENT

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು. ಜಿಲ್ಲಾ ಪಂಚಾಯಿತಿ ಸದಸ್ಯೆಯರಾದ ಶ್ರೀಲತಾ ಸುರೇಶ್‌ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ. ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜಯಶ್ರೀ ಮೊಗವೀರ. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ. ಪಕ್ಷದ ಪ್ರಮುಖರಾದ ಉದಯ್‌ ಕುಮಾರ ಶೆಟ್ಟಿ ಕಿದಿಯೂರು. ತಿಂಗಳೆ ವಿಕ್ರಮಾರ್ಜುನ್‌ ಹೆಗ್ಡೆ. ಯಶ್‌ ಪಾಲ್‌ ಸುವರ್ಣ. ಕಿರಣ್‌ಕುಮಾರ ಕೊಡ್ಗಿ. ಬೈಕಾಡಿ ಸುಪ್ರಸಾದ್‌ ಶೆಟ್ಟಿ. ಬಿ.ಎನ್‌.ಶಂಕರ ಪೂಜಾರಿ. ಸುರೇಶ್‌

ನಾಯಕ್‌ ಕೊಯಿಲಾಡಿ. ತ್ರಾಸಿ ಮಂಜು ನಾಯಕ್‌. ಪ್ರದೀಪ್‌ ಸಂಗಮ್‌. ಮಂಜು ಬಿಲ್ಲವ ಕೋಟೇಶ್ವರ. ಸುರೇಶ್‌ ಶೆಟ್ಟಿ ಕಾಡೂರು. ಜಾನಕಿ ಬಿಲ್ಲವ. ಗಣಪತಿ ಶ್ರೀಯಾನ್‌. ಶ್ಯಾಮಲಾ ಕುಂದರ್‌ ಇದ್ದರು.

ಸಾಂಪ್ರದಾಯಿಕ ಮೀನುಗಾರಿಕ ವೃತ್ತಿ ಮಾಡುತ್ತಿರುವ ಹಿರಿಯ ಮೀನುಗಾರರಾದ ಗುಲಾಬಿ, ನರಸಿಂಹ ಖಾರ್ವಿ, ಮಂಜು ನಾಯ್ಕ್, ಸಾಕು ಶಂಕರ್ ಖಾರ್ವಿ ಅವರುಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧಾ ವಿಜೇತರರಿಗೆ ಬಹುಮಾನ ವಿತರಿಸಲಾಯಿತು. ಬಿಜೆಪಿ ಮೀನುಗಾರರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಸದಾನಂದ ಬಳ್ಕೂರು ಸ್ವಾಗತಿಸಿದರು. ಚಂದ್ರೇಶ್ ಪಿತ್ರೋಡಿ ಹಾಗೂ ನಯನ ನಿರೂಪಿಸಿದರು.

ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾಗಿ

ಬಿಜೆಪಿ ಪರಿವರ್ತನ ಸಮಾವೇಶದಲ್ಲಿ ಭಾಗವಹಿಸಿ ಗಮನ ಸೆಳೆದಿದ್ದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಭಾನುವಾರ ಉತ್ಸವದಲ್ಲಿಯೂ ಪಾಲ್ಗೊಳ್ಳುವ ಮೂಲಕ ಬಿಜೆಪಿಗೆ ತಾನು ಹತ್ತಿರವಾಗುತ್ತಿದ್ದೇನೆ ಎನ್ನುವ ಸಂದೇಶ ನೀಡಿದ್ದಾರೆ. ಮೀನು ಹಿಡಿಯುವ ಸ್ಪರ್ಧೆಯನ್ನು ಕಂಡು ಸಂಭ್ರಮಿಸಿದ ಅವರು, ದೋಣಿ ಏರಿ ಆಳ ಸಮುದ್ರದವರಗೆ ಹೋಗಿ ಮೀನುಗಾರರನ್ನು ಹುರಿದುಂಬಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.