ADVERTISEMENT

ಕ್ಷೇತ್ರದ ಅಭಿವೃದ್ಧಿಯಲ್ಲಿ ಹಾಲಾಡಿ ಕೊಡುಗೆ ಏನು: ಶೆಣೈ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2018, 7:21 IST
Last Updated 2 ಫೆಬ್ರುವರಿ 2018, 7:21 IST
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಡೆಯನ್ನು ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿ ಗುರುವಾರ ಪ್ರತಿಭಟನೆ ನಡೆಸಿತು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿಯವರ ನಡೆಯನ್ನು ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಕುಂದಾಪುರದ ಶಾಸ್ತ್ರಿ ಸರ್ಕಲ್‌ ಬಳಿ ಗುರುವಾರ ಪ್ರತಿಭಟನೆ ನಡೆಸಿತು.   

ಕುಂದಾಪುರ: ‘ಕಾಮಗಾರಿಗಳ ಶಂಕು ಸ್ಥಾಪನೆ, ಯೋಜನೆಗಳ ಅನುಷ್ಠಾನ, ಅಭಿವೃದ್ಧಿ ಯೋಜನೆಗಳ ಮಂಜೂರಾತಿ, ಸಾರ್ವಜನಿಕ ಸಮಸ್ಯೆಗಳಿಗೆ ಪರಿಹಾರ ಸೇರಿದಂತೆ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆಗಳಲ್ಲೂ ಕುಂದಾಪುರ ಶಾಸಕರ ಹಾಜರಿ ಕಾಣ ಸಿಗುವುದಿಲ್ಲ. ಹಾಗಾದಾರೆ ಶಾಸಕತ್ವದ ಅವಧಿಯಲ್ಲಿ ಕುಂದಾಪುರ ಕ್ಷೇತ್ರಕ್ಕೆ ಅವರ ಕೊಡುಗೆಗಳು ಏನು’ ಎಂದು ಯುವ ಕಾಂಗ್ರೆಸ್‌ ಮುಖಂಡ ಅಮೃತ್‌ ಶೆಣೈ ಉಡುಪಿ ಪ್ರಶ್ನಿಸಿದರು.

ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿಯಲ್ಲಿ ಗುರುವಾರ ಅವಧಿಗೆ ಮುನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರ ನಡೆಯನ್ನು ವಿರೋಧಿಸಿ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ನಡೆಸಿದ ಸಾರ್ವಜನಿಕ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

‘ಶಾಸಕರಾಗಿ ಆಯ್ಕೆಯಾದ ಬಳಿಕ ಕ್ಷೇತ್ರದ ಮತದಾರರನ್ನು ಪ್ರತಿನಿಧಿಸುವ ಅವರು ಯಾವುದೇ ಸರ್ಕಾರವಿದ್ದರೂ, ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನವನ್ನು ತರಿಸಿಕೊಳ್ಳುವ ಬದ್ಧತೆ ತೋರಬೇಕು. ಆದರೆ ಹಾಲಾಡಿಯವರು ಈ ಪ್ರಯತ್ನದಲ್ಲಿ ವಿಫಲರಾಗಿದ್ದಾರೆ. ಹಿಂದೆ ಸಚಿವ ಸ್ಥಾನ ಸಿಗಲಿಲ್ಲ ಎನ್ನುವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದರು. ಈ ಬಾರಿ ಬಿಜೆಪಿ ಅಕಾಂಕ್ಷಿಗಳ ಪಟ್ಟಿಯಲ್ಲಿ ತಮ್ಮ ಹೆಸರಿಲ್ಲದೆ ಇರುವುದರಿಂದ ಟಿಕೆಟ್‌ ತಪ್ಪಬಹುದು ಎನ್ನುವ ನೆಲೆಯಲ್ಲಿ ಅತುರಾತುರವಾಗಿ ಅವಧಿಗೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮತದಾರರ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ. ಬಿಜೆಪಿ ಪಕ್ಷದವರಂತೆ ಚುನಾವಣೆ ಸಂದರ್ಭದಲ್ಲಿ ಬಣ್ಣದ ಮಾತುಗಳನ್ನು ಆಡಲು ನಮಗೆ ಬರುವುದಿಲ್ಲ. ಹೃದಯದಿಂದ ಮಾತನಾಡುವ ಕಾಂಗ್ರೆಸ್‌ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅಭಿವೃದ್ಧಿಯೇ ಚುನಾವವಣೆಯ ಅಸ್ತ್ರ’ ಎಂದರು.

ADVERTISEMENT

ಸಭೆಯನ್ನು ಉದ್ದೇಶಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಕಾಸ ಹೆಗ್ಡೆ, ಹಾಲಾಡಿಯವರಿಗೆ ಅವರ ಸ್ವ ಕ್ಷೇತ್ರದಲ್ಲಿಯೇ, ಸ್ವ ಪಕ್ಷದಿಂದಲೇ ಶತ್ರುಗಳು ಹುಟ್ಟಿಕೊಂಡಿರುವುದಕ್ಕೆ ಬಿಜೆಪಿ ಪರಿವರ್ತನಾ ಯಾತ್ರೆಯ ಕುಂದಾಪುರದ ಸಮಾವೇಶ ಒಂದೇ ಸಾಕು. ಅವರು ರಾಜಕೀಯ ಸ್ವಾರ್ಥ ಸಾಧನೆಗಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲ ಎಂದರು. ರಾಜ್ಯ ಇಂಟಕ್‌ ಅಧ್ಯಕ್ಷ ರಾಕೇಶ್‌ ಮಲ್ಲಿ ಹಾಗೂ ನಗರ ಕಾಂಗ್ರೆಸ್‌ ಮುಖಂಡ ವಿನೋದ ಕ್ರಾಸ್ತಾ ಮಾತನಾಡಿದರು.

ಕೋಟ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಶಂಕರ್ ಕುಂದರ್‌, ಮೀನುಗಾರಿಕಾ ನಿಗಮದ ಮಾಜಿ ಅಧ್ಯಕ್ಷ ಬಿ. ಹಿರಿಯಣ್ಣ, ಕಾಂಗ್ರೆಸ್‌ ಐಟಿ ಸೆಲ್‌ನ ರಾಜ್ಯ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಅಚ್ಯುತ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಪುತ್ರನ್‌, ಪುರಸಭಾ ಸದಸ್ಯರಾದ ದೇವಕಿ ಪಿ.ಸಣ್ಣಯ್ಯ, ಪ್ರಭಾಕರ ಶೇರುಗಾರ ಕೋಡಿ, ಚಂದ್ರಶೇಖರ ಖಾರ್ವಿ, ಶ್ರೀಧರ ಶೇರುಗಾರ, ಚಂದ್ರ ಎ. ಅಮೀನ್‌, ಶಿವರಾಂ ಪುತ್ರನ್‌, ಕೇಶವ್‌ ಭಟ್‌, ಯುವ ಕಾಂಗ್ರೆಸ್ ಅಧ್ಯಕ್ಷ ಇಚ್ಚಿತಾರ್ಥ ಶೆಟ್ಟಿ. ಪಕ್ಷದ ಪ್ರಮುಖರಾದ ಬಿ.ಹಾರೂನ್‌ ಸಾಹೇಬ್‌, ಮಲ್ಲಿಕಾ ಬಾಲಕೃಷ್ಣ ಪೂಜಾರಿ, ಗಣೇಶ್‌ ಶೇರುಗಾರ್‌, ರೇವತಿ ಶೆಟ್ಟಿ, ಕಿಶೋರ ಶೆಟ್ಟಿ ಮೈರ್‌ಕೋಮೆ ಇದ್ದರು.

* * 

ಮೋದಿ ಅಲೆಯಲ್ಲಿ ತೇಲಿ ಬಂದ ಸಂಸದೆ ಶೋಭಾ ಕರಂದ್ಲಾಜೆ ಉಡುಪಿ–ಚಿಕ್ಕಮಗಳೂರು ಕ್ಷೇತ್ರವನ್ನು ಬಿಟ್ಟು ಉಳಿದ ಕಡೆಯೆಲ್ಲ ಸಂಚರಿಸುತ್ತಾರೆ.
ಅಮೃತ್‌ ಶೆಣೈ
ಯುವ ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.