ADVERTISEMENT

ರೋಗ ಬರುವ ಮೊದಲೇ ಎಚ್ಚೆತ್ತುಕೊಳ್ಳಿ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2018, 7:24 IST
Last Updated 5 ಫೆಬ್ರುವರಿ 2018, 7:24 IST

ಉಡುಪಿ:  ‘ರಾಜ್ಯದಲ್ಲಿನ 6.5ಕೋಟಿ ಜನರಿಗೆ ಆರೋಗ್ಯ ಸೇವೆ ಒದಗಿಸಲು ಯೂನಿವರ್ಸಲ್ ಹೆಲ್ತ್ ಕಾರ್ಡ್ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಲಿದೆ’ ಎಂದು ಕ್ರೀಡೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜು ಮಾಲೀಕರ ಸಂಘ ಉಡುಪಿ ವಲಯ ಸಹಯೋಗದಲ್ಲಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ‘ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಯಶಸ್ವಿನಿ ಮಾಹಿತಿ’ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಅನಿರೀಕ್ಷಿತವಾಗಿ ಬರುವ ಕಾಯಿಲೆ ಗಳ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟದ ಕೆಲಸವಾಗುತ್ತದೆ. ಇದನ್ನು ಮನಗಂಡ ರಾಜ್ಯ ಸರ್ಕಾರ ಎಲ್ಲ ಕುಟುಂಬಗಳಿಗೂ ಯೂನಿವರ್ಸಲ್ ಹೆಲ್ತ್ ಕಾರ್ಡ್ ನೀಡುವ ಯೋಜನೆಯತ್ತ ಚಿಂತನೆ ನಡೆಸಿದೆ. ಸೇವೆಯನ್ನು ಪಡೆಯಬೇಕಿರುವವರಿಗೆ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್‌ ಅಗತ್ಯವಿಲ್ಲ. ಪ್ರತಿಯೊಬ್ಬ ವ್ಯಕ್ತಿಗೆ ರಾಜ್ಯ ಸರ್ಕಾರವೇ ವಿಮೆ ಮೊತ್ತವನ್ನು ತುಂಬಿ ಎಷ್ಟೇ ಚಿಕಿತ್ಸೆ ವೆಚ್ಚವಾಗಲಿ ಅದನ್ನು ಸರ್ಕಾರವೇ ಭರಿಸಲಿದೆ ಎಂದು ಹೇಳಿದರು.

ADVERTISEMENT

ಪ್ರಸ್ತುತ ದಿನಗಳಲ್ಲಿ ಪ್ರತಿಯೊ ಬ್ಬರಿಗೂ ಜೀವನವನ್ನು ಸುಂದರವಾಗಿ ನಡೆಸಲು ಆರೋಗ್ಯ ಬಹುಮುಖ್ಯ. ನಿಯಮಿತ ತಪಾಸಣೆ ಮಾಡುವುದು ಕೂಡ ಅಷ್ಟೇ ಮುಖ್ಯ. ರೋಗ ಬಂದ ಮೇಲೆ ಪರಿತಪಿಸುವ ಬದಲು ಮೊದಲೇ ಎಚ್ಚೆತ್ತುಕೊಂಡರೆ ಉತ್ತಮ. ಗ್ಯಾರೇಜಿನಲ್ಲಿ ನೀವು ಹೇಗೆ ವಾಹನಗಳನ್ನು ಪ್ರತಿ ಆರು ತಿಂಗಳಿ ಗೊಮ್ಮೆ ದುರಸ್ತಿ ಮಾಡಿಸುತ್ತಿರೊ ಹಾಗೆಯೇ ಆರೋಗ್ಯ ನಿರ್ವಹಣೆಗೆ ನಿಯಮಿತ ಆರೋಗ ತಪಾಸಣೆ ಮುಖ್ಯ ಎಂದರು.

ಆದರ್ಶ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ.ಜಿ.ಎಸ್‌ ಚಂದ್ರಶೇಖರ್‌, ಸಹಕಾರ ಸಂಘದ ಉಪನಿಭಂದಕ  ಬಿ. ಪ್ರವೀಣ್‌ ನಾಯಕ್‌, ನ್ಯೂರೋ ಸರ್ಜರಿ ವಿಭಾಗದ ಮುಖ್ಯಸ್ಥ ಪ್ರೊ.ಎ. ರಾಜಾ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಗ್ಯಾರೇಜು ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಕೆ. ಪ್ರಭಾಕರ್‌ ಉಪಸ್ಥಿತರಿದ್ದರು. ಮಂಜು ನಾಥ ಮಣಿಪಾಲ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.