ಹೆಬ್ರಿ: ‘ತುಳುನಾಡ ದೈವಾರಾಧಕರ ಒಕ್ಕೂಟವು ಸದಸ್ಯರ ಏಳಿಗೆಗಾಗಿ ಶ್ರಮಿಸಲಿದೆ. ಸದಸ್ಯರು ಒಗ್ಗಟ್ಟಾಗಿ ಸಂಘವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸಬೇಕು. ಒಕ್ಕೂಟ ಸದೃಢವಾಗಿ ಬೆಳೆದರೆ ಮುಂದಿನ ಪೀಳಿಗೆಗೆ ದಾರಿದೀಪವಾಗಲಿದೆ’ ಎಂದು ಹೆಬ್ರಿ ತಾಲ್ಲೂಕು ತುಳುನಾಡ ದೈವಾರಾಧಕರ ಒಕ್ಕೂಟದ ಅಧ್ಯಕ್ಷ ಮುದ್ರಾಡಿ ಸುಕುಮಾರ್ ಪೂಜಾರಿ ಹೇಳಿದರು.
ಹೆಬ್ರಿ ಅರ್ಧನಾರೀಶ್ವರ ಸನ್ನಿಧಿಯ ಸಭಾಭವನದಲ್ಲಿ ಶುಕ್ರವಾರ ನಡೆದ ಹೆಬ್ರಿ ತಾಲ್ಲೂಕು ತುಳುನಾಡ ದೈವಾರಾಧಕರ ಒಕ್ಕೂಟದ 5ನೇ ವಾರ್ಷಿಕೋತ್ಸವ, ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
‘ಸದಸ್ಯರಿಗೆ ಸರ್ಕಾರದಿಂದ ಮಾಸಾಶನ ದೊರಕಿಸುವುದು, ಹೆಬ್ರಿಯಲ್ಲಿ ಒಕ್ಕೂಟಕ್ಕೆ ಸ್ವಂತ ನಿವೇಶನ ಹೊಂದುವುದು, ಕಚೇರಿ ತೆರೆಯುವುದು ಸೇರಿ ಹಲವು ಯೋಜನೆಗಳು ನಮ್ಮ ಮುಂದಿವೆ. ಆದ್ದರಿಂದ ಸದಸ್ಯರೆಲ್ಲರೂ ಒಕ್ಕೂಟವನ್ನು ಇನ್ನಷ್ಟು ಬಲಿಷ್ಠವಾಗಿ ಕಟ್ಟಬೇಕು’ ಎಂದು ಹೇಳಿದರು.
ಒಕ್ಕೂಟದ ಉಪಾಧ್ಯಕ್ಷ ನಂದಿ ಪೂಜಾರಿ ಅಮಾಸೆಬೈಲು ಮಾತನಾಡಿದರು. ಇದೇ ಸಂದರ್ಭದಲ್ಲಿ ಹೆಬ್ರಿ ತಾಲ್ಲೂಕು ತುಳುನಾಡ ದೈವಾರಾಧಕರ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಪಾಣಾರ ಮತ್ತವರ ತಂಡದ ಪದಗ್ರಹಣ ಸಮಾರಂಭ ನಡೆಯಿತು. ಒಕ್ಕೂಟದ ಅಧ್ಯಕ್ಷ ಸುಕುಮಾರ್ ಪೂಜಾರಿ ಮುದ್ರಾಡಿ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾಣಾರ, ಕೋಶಾಧಿಕಾರಿ ಅರುಣ್ ಪೂಜಾರಿ ಬೆಪ್ಡೆ ಹಾಗೂ ಹಿರಿಯ ದೈವ ಚಾಕರಿ ಅವರನ್ನು ಗೌರವಿಸಲಾಯಿತು. ಆರೋಗ್ಯ ಸಹಾಯಧನ ನೀಡಲಾಯಿತು.
ಒಕ್ಕೂಟದ ಗೌರವಾಧ್ಯಕ್ಷರಾದ ರಂಗ ಪಾಣಾರ, ಭೋಜ ಪೂಜಾರಿ, ಉಪಾಧ್ಯಕ್ಷರಾದ ನಂದಿ ಪೂಜಾರಿ ಅಮಾಸೆಬೈಲು, ವಿಠ್ಠಲ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂತೋಷ ಪೂಜಾರಿ ಕರ್ಜಾಡಿ, ಕೋಶಾಧಿಕಾರಿ ರಾಘವೇಂದ್ರ ಪಾಣಾರ ಶಿವಪುರ ಇದ್ದರು.
ಸಂತೋಷ ಪೂಜಾರಿ ಕರ್ಜಾಡಿ ಸ್ವಾಗತಿಸಿ, ವಂದಿಸಿದರು. ಸಚಿನ್ ಪಾಡಿಗಾರ್ ನಿರೂಪಿಸಿದರು. ಅರುಣ್ ಪೂಜಾರಿ ವರದಿ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.