ಕೋಟ (ಬ್ರಹ್ಮಾವರ): ಕೋಡಿ ಮೀನು ಗಾರ ಪ್ರಾಥಮಿಕ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಕೋಡಿ ಕನ್ಯಾಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಅಶೋಕ್ ತಿಂಗಳಾಯ ಅಧ್ಯಕ್ಷತೆ ವಹಿಸಿ ಸಂಘವು ವರದಿ ವರ್ಷದಲ್ಲಿ ಅಭಿವೃದ್ಧಿ ಸಾಧಿಸಿ, ₹ 4 ಕೋಟಿಗೂ ಅಧಿಕ ವ್ಯವಹಾರ ಬಂಡವಾಳ ಹೊಂದಲು ಸಾಧ್ಯವಾಗಿದೆ. ಸದಸ್ಯರಿಗೆ ₹ 3 ಕೋಟಿಗೂ ಮಿಕ್ಕಿ ಸಾಲವನ್ನು ನೀಡಿದೆ, ಒಟ್ಟು ₹ 7 ಕೋಟಿ ವ್ಯವಹಾರವನ್ನು ನಡೆಸಿ ವರದಿ ವರ್ಷದಲ್ಲಿ ₹ 7,74,692 ನಿವ್ವಳಲಾಭ ಗಳಿಸಿದ್ದು, ಶೇ. 8 ಡಿವಿಡೆಂಡ್ ಘೋಷಿಸಲಾಗಿದೆ ಎಂದರು.
ಇದೇ ಸಂದರ್ಭ ಹಿರಿಯ ಮೀನು ಗಾರ ಬಿ.ಕೆ.ತೇಜ ಅಂಚನ್, ಕ್ರೀಡೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಸಂಘದ ಸದಸ್ಯ ಗಣೇಶ್ ಪೂಜಾರಿ ಪಾಂಡೇಶ್ವರ, ಹ್ಯಾಮರ್ ಥ್ರೋನಲ್ಲಿ ರಾಷ್ಟ್ರಮಟ್ಟದಲ್ಲಿ ತೃತೀಯ ಸ್ಥಾನಗಳಿಸಿದ ಧೀರಜ್ ಪೂಜಾರಿ ಹಾಗೂ ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ 9 ಮಂದಿ ಸದಸ್ಯರ ಮಕ್ಕಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ 42 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಯಿತು. ಉಡುಪಿ ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಶಿವ ಕುಮಾರ ಮೀನುಗಾರರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ಉಪಾಧ್ಯಕ್ಷ ಉದಯ ಕಾಂಚನ್, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಅಕ್ಷಯ್ ಕುಂದರ್ ಮತ್ತು ನಿರ್ದೇಶಕರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.