ಬ್ರಹ್ಮಾವರ: ‘ನಮ್ಮೊಳಗಿನ ನಮ್ಮತನವನ್ನು ಕಳೆದುಕೊಳ್ಳದೆ ಸದಾ ಜನೋಪಯೋಗಿಯಾಗಿ ಬದುಕು ಸಾಗಿಸಿದರೆ ಜೀವನ ಸಾರ್ಥಕವಾಗುತ್ತದೆ’ ಮುಖಂಡ ಕೆ. ಜಯಪ್ರಕಾಶ ಹೆಗ್ಡೆ ಹೇಳಿದರು.
ಇಲ್ಲಿನ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ, ಜಯಂಟ್ಸ್ ಗ್ರೂಪ್ ವತಿಯಿಂದ ಜನೌಷಧಿ ಕೇಂದ್ರದ ಬಳಿ ನೂತನವಾಗಿ ನಿರ್ಮಿಸಿರುವ ಆಂಬುಲೆನ್ಸ್ ಕೊಠಡಿ, 4 ಆಕ್ಸಿಜನ್ ಕಾನ್ಸೆಂಟ್ರೇಟರ್ ಹಸ್ತಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಶಾಲೆಯಲ್ಲಿ ಶಿಕ್ಷಣ ನೀಡಿದರೆ, ಮನೆಯಲ್ಲಿ ಸಂಸ್ಕಾರ ನೀಡುವ ಕಾರ್ಯ ನಡೆಯಬೇಕು. ನಮ್ಮ ವಾತಾವರಣ ತಿಳಿಮಾಡುವ ಕೆಲಸ ನಿತ್ಯ ನಿರಂತವಾಗಿರಬೇಕು ಎಂದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಮಾತನಾಡಿ, ಜಯಂಟ್ಸ್ ಸಂಸ್ಥೆಯು ಪರಿಸರದ ಜನರಿಗೆ ಅನೇಕ ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಜಯಂಟ್ಸ್ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಸ್ವಚ್ಚ ಭಾರತ ಮತ್ತು ವನಮಹೋತ್ಸವ ಕಾರ್ಯಕ್ರಮ ರಾಷ್ಟ್ರಮಟ್ಟದ ಕಾರ್ಯಕ್ರಮಗಳಾಗಿದ್ದು, ಅದನ್ನು ಮುಂದಿನ ದಿನಗಳಲ್ಲಿ ಪರಿಣಾಮಕಾರಿಯಾಗಿ ಮಾಡಲಾಗುವುದು ಎಂದು ತಿಳಿಸಿದರು.
ಜಯಂಟ್ಸ್ ಫೆಡರೇಷನ್ ಅಧ್ಯಕ್ಷ ತೇಜೇಶ್ವರ್ ರಾವ್, ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ ಶುಭ ಹಾರೈಸಿದರು. ದಾನಿ, ಅನಿವಾಸಿ ಭಾರತೀಯ ಡಾ.ಜೀವನ್ ಪ್ರಕಾಶಿನಿ ಮೂರ್ತಿ, ಎನ್.ಸಿ.ಮೂರ್ತಿ ದಂಪತಿಯನ್ನು ಸನ್ಮಾನಿಸಲಾಯಿತು. ವಾರಂಬಳ್ಳಿ ಗ್ರಾ.ಪಂ. ಅಧ್ಯಕ್ಷ ನಿತ್ಯಾನಂದ ಬಿ.ಆರ್. ಅವರನ್ನು ಗೌರವಿಸಲಾಯಿತು. ನಾಯ್ಕನಕಟ್ಟೆ ಶಾಲೆಗೆ ನೋಟ್ ಪುಸ್ತಕಗಳನ್ನು ಕೊಡುಗೆ ನೀಡಲಾಯಿತು.
ಜಯಂಟ್ಸ್ ಗ್ರೂಪ್ ಅಧ್ಯಕ್ಷ ಅಣ್ಣಯ್ಯ ದಾಸ್ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಮಹೇಶ ಐತಾಳ, ವಿವೇಕಾನಂದ ಕಾಮತ್, ನಿಕಟಪೂರ್ವ ಅಧ್ಯಕ್ಷ ಸುಂದರ ಪೂಜಾರಿ ಮೂಡುಕುಕ್ಕುಡೆ, ಪೂರ್ವಾಧ್ಯಕ್ಷ ವಿಶ್ವನಾಥ ಶೆಟ್ಟಿ, ಎಚ್. ಶಿವರಾಮ ಶೆಟ್ಟಿ, ನಿರ್ದೇಶಕ ಪ್ರದೀಪ್ ಶೆಟ್ಟಿ, ಪ್ರತಿಮಾ, ಡೋರಿಸ್ ಭಾಗವಹಿಸಿದ್ದರು.
ಕಾರ್ಯದರ್ಶಿ ಮಿಲ್ಟನ್ ಒಲಿವರ್ ವರದಿ ವಾಚಿಸಿದರು. ಫೆಡರೇಷನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ದಿವ್ಯಾ ಪೂಜಾರಿ, ಶ್ರೀನಾಥ ಕೋಟ, ಪ್ರಸನ್ನ ಕಾರಂತ, ರೊನಾಲ್ಡ್ ಡಯಾಸ್ ಪರಿಚಯಿಸಿದರು. ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.