ADVERTISEMENT

ಆಟೊ ನಿಲ್ದಾಣಗಳಲ್ಲಿ ಪ್ರತ್ಯೇಕ ಕಾನೂನು, ಬಡ ಚಾಲಕರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2021, 14:17 IST
Last Updated 7 ಆಗಸ್ಟ್ 2021, 14:17 IST

ಉಡುಪಿ: ನಗರಸಭೆ ವ್ಯಾಪ್ತಿಯ 7 ಕಿ.ಮೀ ಪ್ರದೇಶದಲ್ಲಿ ಆಟೊ ಓಡಿಸಬಹುದು, ಯಾವ ನಿಲ್ದಾಣಗಳಲ್ಲಿ ಬೇಕಾದರೂ ರಿಕ್ಷಾ ನಿಲ್ಲಿಸಬಹುದು ಎಂಬ ನಿಮಯವಿದ್ದರೂ ಪಾಲನೆಯಾಗುತ್ತಿಲ್ಲ ಎಂದು ಕೋರ್ಟ್‌ ಹಿಂಬದಿ ರಸ್ತೆಯ ರಿಕ್ಷಾ ಚಾಲಕರ ಹಾಗೂ ಮಾಲೀಕರ ಸಂಘಟನೆ ಅಧ್ಯಕ್ಷ ರಾಜೇಶ್ ಬಿ.ಶೆಟ್ಟಿ ದೂರಿದರು.

ನಗರದ ಕೆಲವು ಆಟೊ ನಿಲ್ದಾಣಗಳಲ್ಲಿ ಪ್ರತ್ಯೇಕ ಕಾನೂನು ರಚಿಸಿಕೊಂಡಿದ್ದಾರೆ. ಬೇರೆ ನಿಲ್ದಾಣಗಳ ಚಾಲಕರು ಆಟೊ ನಿಲ್ಲಿಸಲು ಹೋದರೆ ಕಿರುಕುಳ ನೀಡಿ ಹಲ್ಲೆ ನಡೆಸಲಾಗುತ್ತಿದೆ. ನಿಲ್ದಾಣದಿಂದ ಆಟೊ ಹೊರದಬ್ಬಲಾಗುತ್ತಿದೆ. ದೌರ್ಜನ್ಯದ ವಿರುದ್ಧ ದೂರುಗಳನ್ನು ನೀಡಿದರೂ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.

ಆಟೊ ಚಾಲಕರ ಸಂಘಟನೆಗಳಲ್ಲಿ ರಾಜಕೀಯ ನುಸುಳಿದ್ದು ಇಬ್ಭಾಗವಾಗಿವೆ. ರಾಜಕೀಯ ನಾಯಕರ ಅನುದಾನದಿಂದ ನಿರ್ಮಾಣವಾಗಿರುವ ರಿಕ್ಷಾ ನಿಲ್ದಾಣಗಳನ್ನು ಖಾಸಗಿ ಆಸ್ತಿಯಂತೆ ಕೆಲವರು ಉಪಯೋಗಿಸುತ್ತಿದ್ದಾರೆ. ಇದರಿಂದ ಬಡ ಆಟೊ ಚಾಲಕರಿಗೆ ಸಮಸ್ಯೆಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ನಿಲ್ದಾಣಗಳಲ್ಲಿ ಹೊಸ ಸದಸ್ಯರ ನೇಮಕಾತಿಗೆ ₹ 10000 ದಿಂದ ₹ 30000ದವರೆಗೆ ಸದಸ್ಯತ್ವ ಶುಲ್ಕ ಪಡೆಯಲಾಗುತ್ತಿದೆ. ವಲಯ–1ರ ಆಟೊಗಳು ನಗರಸಭೆಯ 7 ಕಿ.ಮೀ ವ್ಯಾಪ್ತಿಯಲ್ಲಿರುವ ಎಲ್ಲ ನಿಲ್ದಾಣಗಳಲ್ಲಿ ದುಡಿಯಬಹುದು ಎಂಬ ನ್ಯಾಯಾಲಯದ ಆದೇಶವಿದ್ದರೂ ಪಾಲನೆಯಾಗುತ್ತಿಲ್ಲ. ಪ್ರಾದೇಶಿಕ ಸಾರಿಗೆ ಅಧಿಕಾರಿ ವಲಯ 1ರ ಸ್ಟಿಕ್ಕರ್ ನೀಡುವುದನ್ನು ನಿಲ್ಲಿಸಿದ್ದು, ಚಾಲಕರಿಗೆ ಸಮಸ್ಯೆಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಚೆನ್ನಕೇಶವ ಭಟ್‌, ವಿಠಲ ಜತ್ತನ್ನ, ಸ್ಟೇನ್ಲಿ ಬಂಗೇರ, ರಾಜೇಶ್ ಸುವರ್ಣ, ಗಿರೀಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.