ADVERTISEMENT

‘ಪಕ್ಕಿಹಳ್ಳದ ಹಾದಿಗುಂಟ’ 3 ತಲೆಮಾರಿನ ಕತೆ

ಅನುಪಮಾ ಪ್ರಸಾದ್‌ಗೆ ‘ಡಾ.ಎಚ್.ಶಾಂತಾರಾಮ್’ ಸಾಹಿತ್ಯ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2021, 3:22 IST
Last Updated 14 ಆಗಸ್ಟ್ 2021, 3:22 IST
ಕುಂದಾಪುರದ ಭಂಡಾರಕಾರ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅನುಪಮಾ ಪ್ರಸಾದ್ ಅವರಿಗೆ ಈ ಬಾರಿಯ ಡಾ.ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕುಂದಾಪುರದ ಭಂಡಾರಕಾರ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಅನುಪಮಾ ಪ್ರಸಾದ್ ಅವರಿಗೆ ಈ ಬಾರಿಯ ಡಾ.ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.   

ಕುಂದಾಪುರ: ‘ಅನುಪಮಾ ಪ್ರಸಾದ್ ಅವರ ‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿ ಮೂರು ತಲೆಮಾರಿನ ಕಥೆ 20 ನೇ ಶತಮಾನದ ನಮ್ಮ ಭಾರತದ ಚಿತ್ರಣವನ್ನು ಸೂಕ್ಷ್ಮವಾಗಿ ಬಿತ್ತರಿಸುತ್ತದೆ’ ಎಂದು ಹಿರಿಯ ಲೇಖಕ ಪ್ರೊ.ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು.

ಇಲ್ಲಿನ ಭಂಡಾರಕಾರ್ಸ್ ಕಾಲೇಜಿನಲ್ಲಿ ಶುಕ್ರವಾರ ನಡೆದ ಡಾ.ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಪಕ್ಕಿಹಳ್ಳದ ಹಾದಿಗುಂಟ’ ಕಾದಂಬರಿಯನ್ನು ಇತರ ಕಾದಂಬರಿಕಾರರ ಕಾದಂಬರಿಗಳಿಗೆ ಹೋಲಿಸಬಹುದು. ಆದರೆ, ಮೂರು ತಲೆಮಾರಿನ ಸಂಗತಿಗಳನ್ನು ನೈಜತೆಗೆ ಹತ್ತಿರವಾಗಿ ಈ ಕಾದಂ‌ಬರಿಯಲ್ಲಿ ಬಿತ್ತರಿಸುತ್ತದೆ ಎಂಬುದು ಮನಸಿಗೆ ಸ್ಪಷ್ಟವಾಗಿ ಕಾಣುತ್ತದೆ’ ಎಂದರು.

ADVERTISEMENT

‘ಒಂದು ವಿಚಿತ್ರ ಸಂವೇದನೆಯೊಂದಿಗೆ ಓದಿಸಿಕೊಂಡು ಹೋಗುವ ಕಾದಂಬರಿಯಲ್ಲಿನ ಪಾತ್ರಗಳ ಮೂಲಕ ಹಲವು ದೃಷ್ಟಿಕೋ ನಗಳಲ್ಲಿ ಕಥೆಯನ್ನು ಹೇಳಲಾಗಿದೆ. ಇಲ್ಲಿನ ಪ್ರತಿಯೊಂದು ಪಾತ್ರಗಳು ಅತ್ಯಂತ ಮುಖ್ಯವೆನಿಸುತ್ತದೆ. ಕೊನೆಯಲ್ಲಿ ಮನುಷ್ಯ ಜೀವನದ ಜೀವಂತಿಕೆ ಇರುವುದು ನದಿಗಳ ಜೀವ ಸೆಲೆಗಳಲ್ಲಿ ಎನ್ನುವುದನ್ನು ಹೇಳಲಾಗಿದೆ. ಪುಟ್ಟ ಗ್ರಾಮದಲ್ಲಿನ ಎಂಡೋಸಲ್ಫಾನ್ ಮನುಷ್ಯನ ಜೀವನವನ್ನು ನರಕಕ್ಕೆ ತಳ್ಳಿದಂತೆ, ಭಾರತದ ಬದುಕು ವಿಷಮಯವಾಗುತ್ತಿದೆ ಎನ್ನುವ ದೇಶದ ಚಿತ್ರಣವನ್ನು ಕಟ್ಟಿಕೊಡುತ್ತದೆ’ ಎಂದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಲೇಖಕಿ ಅನುಪಮಾ ಪ್ರಸಾದ್ ಅವರು, ಸಾಹಿತ್ಯ ಎಂದರೆ ಅದೊಂದು ಬೆಳಕು. ಸಣ್ಣ ಬತ್ತಿಯಿಂದ ಕಾಳ್ಗಿಚ್ಚಿನವರೆಗೆ ಪರಿಣಾಮ ಬೀರುವಷ್ಟು ಸಾಹಿತ್ಯ ಪ್ರಬಲವಾಗಿದೆ. ಬರವಣಿಗೆ ನನಗೆ ಉಸಿರು ಸೇರಿದಂತೆ ಎಲ್ಲವನ್ನೂ ಕೊಟ್ಟಿದೆ ಎಂದರು.

ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜುಕೇಷನ್ ಆಡಳಿತಾಧಿ ಕಾರಿ ಡಾ. ಎಚ್. ಶಾಂತಾರಾಮ್ ಅವರು ಮಾತನಾಡಿ, ’ಪ್ರತಿಯೊಬ್ಬರು ಕಾದಂಬರಿ ಯನ್ನು ಓದುವುದರಿಂದ ಜ್ಞಾನ ವರ್ಧನೆಯಾಗುತ್ತದೆ. ವಿದ್ಯಾರ್ಥಿ ಗಳು ಸಾಹಿತ್ಯವನ್ನು ಓದುವಂತಹ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದರು.

ಕಾಲೇಜಿನ ವಿಶ್ವಸ್ಥ ಮಂಡಳಿ ಸದಸ್ಯರಾದ ಕೆ. ದೇವದಾಸ್ ಕಾಮತ್ ಅಧ್ಯಕ್ಷತೆ ವಹಿಸಿ, ಲೇಖಕಿ ಅನುಪಮಾ ಪ್ರಸಾದ್‌ ಅವರಿಗೆ ಡಾ. ಎಚ್. ಶಾಂತಾರಾಮ್ ಸಾಹಿತ್ಯ ಪ್ರಶಸ್ತಿ ಪ್ರದಾನ ಮಾಡಿದರು.

ಡಾ.ಪ್ರಸಾದ್, ಕಾಲೇಜಿನ ಶಿಕ್ಷಕ -ರಕ್ಷಕ ಸಂಘದ ಅಧ್ಯಕ್ಷೆ ಲೋನಾ ಇದ್ದರು. ಲೇಖಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ, ದೇವು ಪತ್ತಾರ್ ಹಾಗೂ ನರೇಂದ್ರ ರೈ ದೇರ್ಲ ಅವರು ಡಾ.ಎಚ್. ಶಾಂತಾರಾಂ‌ ಸಾಹಿತ್ಯ ಪ್ರಶಸ್ತಿ ನಿರ್ಣಾಯಕರಾಗಿದ್ದರು.

ಭಂಡಾರಕಾರ್ಸ್ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ.ನಾರಾಯಣ ಶೆಟ್ಟಿ ಸ್ವಾಗತಿಸಿದರು.

ಕನ್ನಡ ವಿಭಾಗ ಮುಖ್ಯಸ್ಥೆ ಡಾ.ರೇಖಾ ಬನ್ನಾಡಿ ಪ್ರಾಸ್ತಾವಿಕ ಮಾತನಾಡಿದರು.

ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ.ಜಿ.ಎಂ.ಗೊಂಡ ವಂದಿಸಿದರು.
ಉಪನ್ಯಾಸಕಿ ರೋಹಿಣಿ ಎಚ್.ಬಿ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.