ಉಡುಪಿ: ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ 2021–22ನೇ ಸಾಲಿನಲ್ಲಿ ₹ 11.02 ಕೋಟಿ ನಿವ್ವಳ ಲಾಭ ಗಳಿಸಿದ್ದು ಷೇರುದಾರರಿಗೆ ಶೇ 15ರಷ್ಟು ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದು ಸೊಸೈಟಿಯ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಜಯಕರ ಶೆಟ್ಟಿ ಇಂದ್ರಾಳಿ ಘೋಷಿಸಿದರು.
ಅಮ್ಮಣ್ಣಿ ರಾಮಣ್ಣ ಸಭಾಭವನದಲ್ಲಿ ಭಾನುವಾರ ಸೊಸೈಟಿ ಅಧ್ಯಕ್ಷ ಸಂಜೀವ್ ಕಾಂಚನ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಲೆಕ್ಕಪತ್ರ ಮಂಡಿಸಿದ ಅವರು, ಬಡಗಬೆಟ್ಟು ಕ್ರೆಡಿಸ್ ಕೋಆಪರೇಟಿವ್ ಸೊಸೈಟಿ ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ ಎಂದರು.
18,860 ಸದಸ್ಯರಿಂದ ₹ 4.74 ಕೋಟಿ ಪಾಲು ಬಂಡವಾಳ ಹೊಂದಿರುವ ಸೊಸೈಟಿಯು ₹ 401.50 ಕೋಟಿ ಠೇವಣಿ ಹೊಂದಿದೆ. ₹ 295.11 ಕೋಟಿ ಹೊರಸಾಲ ಬಾಕಿ ಹೊಂದಿದೆ. ಆಗಸ್ಟ್ 2022ರ ಅಂತ್ಯಕ್ಕೆ ₹ 409.02 ಕೋಟಿ ಠೇವಣಿ, ₹ 316 ಕೋಟಿ ಸಾಲ ಇದೆ ಎಂದು ಮಾಹಿತಿ ನೀಡಿದರು.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪೂರ್ಣಾಂಕ ಪಡೆದ ಮಲ್ಪೆಯ ಪುನೀತ್ ನಾಯ್ಕ, ಕೇದಾರ್ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಸಿಬ್ಬಂದಿಯ ಪುತ್ರಿ ದೀಪಾಲಿ, ಆಯುರ್ವೇದ ವೈದ್ಯಕೀಯದಲ್ಲಿ ಚಿನ್ನದ ಪದಕ ಪಡೆದ ಡಾ.ಸ್ವಾತಿ ಅವರನ್ನು ಗೌರವಿಸಲಾಯಿತು.
ಪ್ರಧಾನ ವ್ಯವಸ್ಥಾಪಕ (ಪ್ರಭಾರ) ರಾಜೇಶ್ ಶೇರಿಗಾರ್ ವರದಿ ಮಂಡಿಸಿದರು. ಉಪಾಧ್ಯಕ್ಷ ಎಲ್.ಉಮಾನಾಥ್ ನಿರ್ದೇಶಕರಾದ ಹಾಜಿ ಸಯ್ಯದ್ ಅಬ್ದುಲ್ ರಝಾಕ್, ಪುರುಷೋತ್ತಮ್ ಶೆಟ್ಟಿ, ವಸಂತ್ ಕಾಮತ್, ವಿನಯ್ ಕುಮಾರ್, ಜಯಾನಂದ್, ಪದ್ಮನಾಭ್ ನಾಯಕ್, ರಘುರಾಮ ಶೆಟ್ಟಿ, ಗಾಯತ್ರಿ ಭಟ್, ಜಯ ಶೆಟ್ಟಿ, ಸದಾಶಿವ ನಾಯ್ಕ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.