ಉಡುಪಿ: 2022ರ ಜನವರಿಯಲ್ಲಿ ಆರಂಭವಾಗುವ ಪರ್ಯಾಯ ಮಹೋತ್ಸವದ ಪೂರ್ವಭಾವಿಯಾಗಿ ಸೋಮವಾರ ಬೆಳಿಗ್ಗೆ ಕೃಷ್ಣಾಪುರ ಮಠದಲ್ಲಿ ಬಾಳೆ ಮುಹೂರ್ತ ನೆರವೇರಿತು.
ಪರ್ಯಾಯ ಪೂರ್ವ ವಿಧಿವಿಧಾನಗಳಲ್ಲಿ ಬಾಳೆ ಮುಹೂರ್ತವು ಮೊದಲನೆಯದ್ದು. ಬೆಳಿಗ್ಗೆ 8.32ರ ಧನುರ್ಲಗ್ನದಲ್ಲಿ ಭಾವಿ ಪರ್ಯಾಯ ಪೀಠಾಧಿಪತಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಮಠದ ಹಿಂಭಾಗದಲ್ಲಿ ಬಾಳೆ ಗಿಡ, ತುಳಸಿ ಹಾಗೂ ಕಬ್ಬಿನ ಗಿಡಗಳನ್ನು ನೆಟ್ಟರು.
ಬಾಳೆ ಮುಹೂರ್ತಕ್ಕೂ ಮುನ್ನ ಕೃಷ್ಣಾಪುರ ಮಠದಲ್ಲಿ ನವಗ್ರಹ ಹೋಮ, ಪ್ರಾರ್ಥನೆ, ಅನಂತೇಶ್ವರ ಹಾಗೂ ಚಂದ್ರಮೌಳೀಶ್ವರ ದೇವಾಲಯಗಳಲ್ಲಿ ಪೂಜೆ ನಡೆಯಿತು. ಕೃಷ್ಣ ಮಠ, ಮುಖ್ಯಪ್ರಾಣ ಸನ್ನಿಧಿ, ಸುಬ್ರಹ್ಮಣ್ಯ ಗುಡಿ, ನವಗ್ರಹ ಗುಡಿ, ವೃಂದಾವನಗಳಲ್ಲಿ ಪ್ರಾರ್ಥನೆ ಸಲ್ಲಿಸಿ ಬಾಳೆಗಿಡಗಳನ್ನು ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ಕೃಷ್ಣಾಪುರ ಮಠಕ್ಕೆ ತರಲಾಯಿತು.
ಉಡುಪಿಯ ಅಷ್ಟ ಮಠಗಳ ಸಹಿತ, ಮಾಧ್ವ ಮಠಗಳು ಹಾಗೂ ಅನಂತೇಶ್ವರ ಚಂದ್ರಮೌಳಿಶ್ವರ ದೇವಸ್ಥಾನಗಳಿಗೆ ನವಧಾನ್ಯ ನೀಡಲಾಯಿತು. ಮಠದ ಪುರೋಹಿತರಾದ ಶ್ರೀನಿವಾಸ ಉಪಾಧ್ಯ ಧಾರ್ಮಿಕ ವಿಧಿಗಳನ್ನು ನಡೆಸಿಕೊಟ್ಟರು. ಮುಂದೆ, ಕ್ರಮವಾಗಿ ಅಕ್ಕಿ ಮುಹೂರ್ತ, ಕಟ್ಟಿಗೆ ಮುಹೂರ್ತ ಹಾಗೂ ಭತ್ತ ಮುಹೂರ್ತ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.