ಬನ್ನಂಜೆ ಉಡುಪಿ ನಮನ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದ ಉದ್ಘಾಟಿಸಿದರು
ಉಡುಪಿ: ಬನ್ನಂಜೆ ಗೋವಿಂದಾಚಾರ್ಯ ಅವರು ತಮ್ಮ ಕೃತಿಗಳಲ್ಲಿ ಸತ್ಯದರ್ಶನ ಮಾಡುವ ಮೂಲಕ ದಾರ್ಶನಿಕರಾಗಿದ್ದಾರೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ಯ ಶ್ರೀಶಾನಂದ ಅಭಿಪ್ರಾಯಪಟ್ಟರು.
ಬೆಂಗಳೂರಿನ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ವತಿಯಿಂದ ಪರ್ಯಾಯ ಪುತ್ತಿಗೆ ಮಠ ಹಾಗೂ ಎಂಜಿಎಂ ಕಾಲೇಜು ಸಹಯೋಗದಲ್ಲಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬನ್ನಂಜೆ ಉಡುಪಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂಸ್ಕೃತದ ಯಾವ ವಿಚಾರಗಳು ಜನರಿಗೆ ತಿಳಿಯದೆ ಉಳಿದಿತ್ತೊ ಅದನ್ನು ಜನರಿಗೆ ತಿಳಿಸಿದ ಶ್ರೇಯಸ್ಸು ಬನ್ನಂಜೆ ಅವರಿಗೆ ಸಲ್ಲುತ್ತದೆ. ಯುವಜನರೂ ಅವರ ವಿಚಾರಗಳಿಂದ ಆಕರ್ಷಿತರಾಗಿದ್ದಾರೆ ಎಂದೂ ಹೇಳಿದರು.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಅಧ್ಯಕ್ಷ ಮಲ್ಲೇಪುರಂ ಜಿ.ವೆಂಕಟೇಶ್ ಮಾತನಾಡಿ, ಭಾರತೀಯ ಸಂಸ್ಕೃತಿಯ ಒಟ್ಟು ಸ್ವರೂಪ ಹೇಗೆ ಮತ್ತು 21ನೇ ಶತಮಾನಕ್ಕೆ ಭಾರತೀಯ ಸಂಸ್ಕೃತಿಯ ಆವರಣವನ್ನು ಹೇಗೆ ನಿರ್ಮಾಣ ಮಾಡುವುದು ಎಂಬುದನ್ನು ಬನ್ನಂಜೆ ಗೋವಿಂದಾಚಾರ್ಯರು ಪ್ರತಿಪಾದಿಸಿದ್ದಾರೆ ಎಂದರು.
ಬನ್ನಂಜೆ ಉಡುಪಿ ನಮನ ಕಾರ್ಯಕ್ರಮದ ಮೂಲಕ ಶ್ರೇಯಸ್ಸಿನ ಮಾರ್ಗದಲ್ಲಿ ಆಚಾರ್ಯರನ್ನು ನೆನಪಿಸಿಕೊಂಡಿದ್ದೇವೆ ಎಂದು ಹೇಳಿದರು.
ಶಾಸಕ ಯಶ್ಪಾಲ್ ಸುವರ್ಣ, ಮಾಜಿ ಶಾಸಕ ರಘುಪತಿ ಭಟ್, ಎಂಜಿಎಂ ಕಾಲೇಜು ಪ್ರಾಂಶುಪಾಲೆ ವನಿತಾ ಮಯ್ಯ, ಪ್ರತಿಷ್ಠಾನದ ಮುಖ್ಯಸ್ಥೆ ವೀಣಾ ಬನ್ನಂಜೆ, ಲೇಖಕಿ ಸಂಧ್ಯಾ ಪೈ, ಗಾಂಧಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಹರಿಶ್ಚಂದ್ರ, ಯು.ವಿಶ್ವನಾಥ ಶೆಣೈ ಭಾಗವಹಿಸಿದ್ದರು.
ಆಸ್ಟ್ರೊ ಮೋಹನ್ ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು.
ಬಳಿಕ ನಡೆದ ವಿಚಾರಗೋಷ್ಠಿಯಲ್ಲಿ ವಿದ್ವಾಂಸರಾದ ಬ್ರಹ್ಮಣ್ಯಾಚಾರ್ಯ, ಪಾದೆಕಲ್ಲು ವಿಷ್ಣು ಭಟ್, ನಿತ್ಯಾನಂದ ಪಡ್ರೆ, ಎಂ.ಎಲ್.ಸಾಮಗ, ಗಣನಾಥ ಎಕ್ಕಾರು ವಿಚಾರ ಮಂಡಿಸಿದರು.
ರಾಮಾಂಜಿ ನಮ್ಮಭೂಮಿ, ರಾಜೇಶ್ ಭಟ್ ಪಣಿಯಾಡಿ, ರಾಘವೇಂದ್ರ ಪ್ರಭು ಕರ್ವಾಲು, ರಮಾನಂದರಾವ್, ಸಂಧ್ಯಾ ಶೆಣೈ, ಸಿದ್ದಬಸಯ್ಯಸ್ವಾಮಿ ಚಿಕ್ಕಮಠ, ಭಾರ್ಗವಿ ಐತಾಳ, ಶ್ರೀನಿವಾಸ ಉಪಾಧ್ಯ ನಿರ್ವಹಣೆ ಮಾಡಿದರು.
‘ಬನ್ನಂಜೆ ತಪೋಭೂಮಿ ಉಡುಪಿ’:
ಬನ್ನಂಜೆ ಉಡುಪಿ ನಮನ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನದ ಗೌರವಾಧ್ಯಕ್ಷ ವಿದ್ಯಾಭೂಷಣ ಅವರು ಬನ್ನಂಜೆ ಗೋವಿಂದಾಚಾರ್ಯರ ವಾಗ್ಮಯ ತಪಸ್ಸಿಗೆ ಉಡುಪಿ ತಪೋಭೂಮಿಯಾಗಿದೆ. ಬನ್ನಂಜೆ ಉಡುಪಿ ನಮನ ಕಾರ್ಯಕ್ರಮ ಇಲ್ಲಿ ನಡೆದಿರುವುದು ಅತ್ಯಂತ ಅರ್ಥಪೂರ್ಣವಾಗಿದೆ ಎಂದು ಹೇಳಿದರು. ಚಿಂತಕ ಗಂಗಾವತಿ ಪ್ರಾಣೇಶ್ ಸಮಾರೋಪ ಭಾಷಣ ಮಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ತಿಂಗಳೆ ಪ್ರತಿಷ್ಠಾನದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಸಂಶೋಧಕಿ ಉಷಾ ಚಡಗ ನಾರಾಯಣ ಮಡಿ ಹಾಸ್ಯ ಭಾಷಣಕಾರ ಮಾಮನಿ ಉಪಸ್ಥಿತರಿದ್ದರು. ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.