ಬ್ರಹ್ಮಾವರ: ಬಾರ್ಕೂರು ಮೂಡಹಡು ಪಾಂಡೇಶ್ವರ ಸಾಸ್ತಾನ ಸಂಪರ್ಕಿಸುವ ರಸ್ತೆಯಲ್ಲಿ ಬೆಣ್ಣೆಕುದ್ರು ಬಳಿ ನಿರ್ಮಾಣಗೊಂಡ ನೂತನ ಸೇತುವೆ ಕಾಮಗಾರಿ ಪೂರ್ಣಗೊಂಡಿದ್ದು, ವಾಹನ ಸಂಚಾರಕ್ಕೆ ಮುಕ್ತವಾಗಿದೆ.
ವಾಹನಗಳ ಭರಾಟೆಯ ಸಂಚಾರದಿಂದಾಗಿ ಭಾಗಶಃ ಶಿಥಿಲಗೊಂಡಿದ್ದ ಕಿರುಸೇತುವೆಗೆ ಬದಲಾಗಿ ನಿರ್ಮಿಸಲ್ಪಟ್ಟ ಸೇತುವೆ ಕಾಮಗಾರಿ ಮಳೆಗಾಲದ ಮುನ್ನ ಪೂರ್ಣಗೊಂಡಿದೆ. ಸೇತುವೆಯ ಕೂಡು ರಸ್ತೆಗೆ ಡಾಂಬರೀಕರಣ, ತಡೆಗೋಡೆ ಕಾಮಗಾರಿ ಬಾಕಿ ಉಳಿದಿದ್ದು ಮಳೆಗಾಲ ಮುಗಿಯುತ್ತಿದ್ದಂತೆ ಸೇತುವೆಯಲ್ಲಿ ಈ ಕಾಮಗಾರಿ ಪೂರ್ಣಗೊಂಡು ಮುಕ್ತ ಸಂಚಾರಕ್ಕೆ ಅಧಿಕೃತ ಚಾಲನೆ ದೊರಕಲಿದೆ.
ಭಾರಿ ವಾಹನ ಬಿಟ್ಟು ಲಘು ವಾಹನಗಳು ತಿರುಗಾಡಲು ಅನುವು ಮಾಡಿಕೊಡಲಾಗಿದ್ದು, ಜನರಿಗೆ ಈ ಹಿಂದೆ ಇದ್ದ ಸಂಚಾರ ತೊಂದರೆ ದೂರವಾಗಲಿದೆ. ಯಡ್ತಾಡಿ ಬಾರ್ಕೂರಿನಿಂದ ಬೆಣ್ಣೆಕುದ್ರು ಮೂಲಕ ಪಾಂಡೇಶ್ವರ ಸಾಸ್ತಾನದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 66ಕ್ಕೆ ನೇರ ಸಂಪರ್ಕ ಕಲ್ಪಿಸುವ ರಸ್ತೆ ಮುಂದೆ ಮುಖ್ಯರಸ್ತೆಯಾಗಿ ಮಾರ್ಪಾಡಾದಲ್ಲಿ ಜನರಿಗೆ ಅನುಕೂಲವಾಗುವುದು.
ರಸ್ತೆ ಅಗಲೀಕರಣಕ್ಕೆ ಬೇಡಿಕೆ: ಸಾಸ್ತಾನಬೆಣ್ಣೆಕುದ್ರು ಬಾರ್ಕೂರು ರಸ್ತೆ ಅಗಲೀಕರಿಸಿ ಅಭಿವೃದ್ಧಿ ಪಡಿಸಲು ಹಲವು ಸಮಯದಿಂದ ಬೇಡಿಕೆ ಇದೆ. ಕೆಲವು ಭಾಗಗಳಲ್ಲಿ ಕಿರಿದಾದ ರಸ್ತೆಯನ್ನು ಅಗಲೀಕರಣಗೊಳಿಸಿ ಆಭಿವೃದ್ದಿಪಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.