ADVERTISEMENT

ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣ: ಜುಲೈ6ರಂದು ವಿಚಾರಣೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2018, 16:26 IST
Last Updated 3 ಜುಲೈ 2018, 16:26 IST
   


ಉಡುಪಿ: ಉದ್ಯಮಿ ಭಾಸ್ಕರ್‌ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಆರೋಪಿ ರಾಜೇಶ್ವರಿ ಶೆಟ್ಟಿ ಪರ ವಕೀಲರಾದ ಅಶ್ವಿನ್‌ ಕುಮಾರ್‌ ಜೋಶಿ ಅವರು ವಕಾಲತಿನಿಂದ ನಿವೃತ್ತರಾದ ಕಾರಣ ಮಂಗಳವಾರ ಪ್ರಧಾನ ಜಿಲ್ಲಾ ಹಾಗೂ ಸೆಷನ್ಸ್ ನ್ಯಾಯಾಲಯದಲ್ಲಿ ನಡೆಯಬೇಕಿದ್ದ ಪಾಟಿ ಸವಾಲು ಪ್ರಕ್ರಿಯೆ ನಡೆಯಲಿಲ್ಲ.‌

ಮಂಗಳವಾರ ಮೃತ ಭಾಸ್ಕರ್ ಶೆಟ್ಟಿ ಅವರ ತಾಯಿ ಗುಲಾಬಿ ಶೇಡ್ತಿ ಅವರು ಪಾಟಿ ಸವಾಲಿಗೆ ಒಳಪಡಬೇಕಿತ್ತು ಹಾಗೂ ಹಿಂದೆ ಮಣಿಪಾಲ ಠಾಣೆಯಲ್ಲಿ ತನಿಖಾಧಿಕಾರಿಯಾಗಿದ್ದ ಎಸ್‌.ವಿ.ಗಿರೀಶ್‌ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಬೇಕಿತ್ತು. ಅಶ್ವಿನ್ ಕುಮಾರ್ ಅವರು ಪ್ರಕರಣದ ವಕಾಲತಿನಿಂದ ನಿವೃತ್ತಿಯಾದ ಕಾರಣ ಯಾರ ಹೇಳಿಕೆಗಳೂ ದಾಖಲಾಗಲಿಲ್ಲ.

ಮಂಗಳೂರಿನ ವಕೀಲರಾದ ನಾರಾಯಣ ಪೂಜಾರಿ ಎಂಬುವರು ರಾಜೇಶ್ವರಿ ಶೆಟ್ಟಿ ಪರ ವಕಾಲತ್ತು ವಹಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಮುಂದಿನ ವಿಚಾರಣೆ ಇದೇ 6ರಂದು ನಡೆಯಲಿದೆ ಎಂದು ಸರ್ಕಾರಿ ಅಭಿಯೋಜಕರಾದ ಶಾಂತಾ ಬಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

2016ರ ಜುಲೈ 28ರಲ್ಲಿ ನಡೆದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ರಾಜ್ಯದಾದ್ಯಂತ ಸುದ್ದಿಯಾಗಿತ್ತು. ಭಾಸ್ಕರ್ ಶೆಟ್ಟಿ ಅವರ ಪತ್ನಿ ರಾಜೇಶ್ವರಿ, ಪುತ್ರ ನವನೀತ್‌ ಶೆಟ್ಟಿ ಹಾಗೂ ನಂದಳಿಕೆಯ ನಿರಂಜನ್‌ ಭಟ್ ಅವರನ್ನು ಕೊಲೆ ಪ್ರಕರಣದಡಿ ಬಂಧಿಸಲಾಗಿದೆ. ಆರೋಪಿಗಳು ಇನ್ನೂ ಜೈಲಿನಲ್ಲಿದ್ದು, ಜಾಮೀನಿಗಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸಾಕ್ಷಿಗಳ ಹಾಗೂ ಆರೋಪಿಗಳ ವಿಚಾರಣೆ ಆರಂಭಿಸುವಂತೆ ಸುಪ್ರೀಂಕೋರ್ಟ್‌ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಜುಲೈ2ರಿಂದ ವಿಚಾರಣೆ ಆರಂಭವಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.