ಕಳೆದ ವರ್ಷದಿಂದ ಕಾಡುತ್ತಿರುವ ಕೋವಿಡ್-19 ಸೋಂಕಿನ ಮಾರಕ ಎರಡನೇ ಅಲೆಯು ಅತೀವವಾಗಿ ಕಂಗೆಡಿಸಿದೆ. ದೇಶದಲ್ಲಿ ನಿತ್ಯ ಸಾವಿರಾರು ಅಮಾಯಕರು ಸೋಂಕಿಗೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಲಕ್ಷಾಂತರ ಜನರು ಸೋಂಕಿನಿಂದ ಚಡಪಡಿಸುತ್ತಿದ್ದಾರೆ. ಈ ಅತ್ಯಂತ ವಿಷಮ ಪರಿಸ್ಥಿತಿಯಲ್ಲಿ ನಾವೆಲ್ಲರೂ ಧೈರ್ಯಗುಂದದೆ ಇರಬೇಕಾಗಿದೆ.
ವಿಜ್ಞಾನಿಗಳು, ತಜ್ಞರು, ವೈದ್ಯರು ಕೋವಿಡ್-19 ಬಗ್ಗೆ ಆಳವಾಗಿ ಅಧ್ಯಯನ ನಡೆಸಿ ಸೋಂಕು ಎದುರಿಸಲು ಸೂಕ್ತ ಮಾರ್ಗದರ್ಶನವನ್ನು ನೀಡಿದ್ದು, ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸುವುದು ಅಗತ್ಯವಾಗಿದೆ. ಕೋವಿಡ್ ವಿರುದ್ಧ ಅತ್ಯಲ್ಪ ಕಾಲದಲ್ಲಿ ಲಸಿಕೆಗಳನ್ನು ಕಂಡುಹಿಡಿದ ವಿಜ್ಞಾನಿಗಳು ಹಾಗು ತಜ್ಞರು ಅಭಿನಂದನಾರ್ಹರಾಗಿದ್ದು, ಎಲ್ಲರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು. ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ತಪ್ಪು ತಿಳುವಳಿಕೆ ಹಾಗೂ ಮೂಢನಂಬಿಕೆಗಳಿಗೆ ಬಲಿಯಾಗದೆ ಎಲ್ಲರೂ ಶೀಘ್ರ ಲಸಿಕೆ ಹಾಕಿಸಿಕೊಳ್ಳೋಣ.
ಉಡುಪಿ ಜಿಲ್ಲೆಯಲ್ಲಿ ಮೇ 10ರಿಂದ ಕಟ್ಟುನಿಟ್ಟಿನ ಸಂಪೂರ್ಣ ಲಾಕ್ಡೌನ್ ಮಾಡುವುದಾಗಿ ಜಿಲ್ಲಾಡಳಿತ. ಸೋಂಕು ಹರಡುವಿಕೆ ತಡೆಗೆ ಇದು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದ್ದು, ಎಲ್ಲರೂ ಮನೆಯಲ್ಲಿಯೇ ಸುರಕ್ಷಿತವಾಗಿ ಉಳಿಯಬೇಕು. ಇದು ಕಷ್ಟದ ಕೆಲಸವಾದರೂ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್ಡೌನ್ ನಿಯಮ ಪಾಲಿಸೋಣ.
ಕಳೆದ ವರ್ಷ ಕಾರ್ಮಿಕರು, ನಿರಾಶ್ರಿತರು, ವೃದ್ಧರು ಇನ್ನಿತರರಿಗೆ ಸಹಾಯ ಹಸ್ತ ನೀಡಿದಂತೆ, ಈಗಲೂ ಸಾಧ್ಯವಾದ ಸಹಾಯ ಮಾಡಲು ಉಡುಪಿ ಧರ್ಮಪ್ರಾಂತ ಹಾಗೂ ಅದರ ಎಲ್ಲ ಚರ್ಚುಗಳು ಸಿದ್ಧವಾಗಿವೆ. ಜಿಲ್ಲೆಯ 52 ಧರ್ಮಕೇಂದ್ರಗಳೂ ಕೆಥೊಲಿಕ್ ಸಭಾ, ಯುವ ಸಂಚಲನ ಹಾಗೂ ಇನ್ನಿತರ ಸಂಸ್ಥೆಗಳ ಮೂಲಕ ಬೇಕಾದ ನೆರವು ನೀಡಲಾಗುವುದು.
ಈ ವಿಷಮ ಕಾಲದಲ್ಲಿ ಕೋವಿಡ್ ಸೋಂಕಿನಿಂದ ಮುಕ್ತಿ ಹೊಂದಲು ಸಾಧ್ಯವಾದ ಎಲ್ಲ ಪ್ರಯತ್ನಗಳನ್ನು ಮಾಡೋಣ. ಸೃಷ್ಟಿಸಿದ ಭಗವಂತ ರಕ್ಷಕನೂ ಆಗಿದ್ದು, ಮೊರೆಯಿಡೋಣ. ಪರಸ್ಪರರಿಗಾಗಿ ಪ್ರಾರ್ಥಿಸೋಣ. ಕರುಣಾಮಯಿ ದೇವರು ಎಲ್ಲರನ್ನು ರಕ್ಷಿಸಿ ಕಾಪಾಡಲಿ.
–ಡಾ.ಜೆರಾಲ್ಡ್ ಲೋಬೊ, ಉಡುಪಿಯ ಧರ್ಮಾಧ್ಯಕ್ಷರು
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.