ADVERTISEMENT

ಪರಶುರಾಮ ಮೂರ್ತಿಯ ಅಪಪ್ರಚಾರ: ಪ್ರಕರಣ ದಾಖಲಿಸುವಂತೆ BJP ಮನವಿ

ಪೊಲೀಸ್ ಠಾಣೆ, ತಹಶೀ‌ಲ್ದಾರರಿಗೆ ಮನವಿ ಸಲ್ಲಿಸಿದ ಬಿಜೆಪಿ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 17 ಜುಲೈ 2025, 7:10 IST
Last Updated 17 ಜುಲೈ 2025, 7:10 IST
ಕಾರ್ಕಳ ತಾಲ್ಲೂಕಿನ ಬೈಲೂರು ಪರಶುರಾಮ ಮೂರ್ತಿಯ ಕುರಿತು ಅಪಪ್ರಚಾರ ಮಾಡಿದ ಕಾಂಗ್ರೆಸ್ ಮುಖಂಡ ಮತ್ತವರ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರಿ ಬುಧವಾರ ಬಿಜೆಪಿ ಕಾರ್ಯಕರ್ತರು ತಾಲ್ಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಕಾರ್ಕಳ ತಾಲ್ಲೂಕಿನ ಬೈಲೂರು ಪರಶುರಾಮ ಮೂರ್ತಿಯ ಕುರಿತು ಅಪಪ್ರಚಾರ ಮಾಡಿದ ಕಾಂಗ್ರೆಸ್ ಮುಖಂಡ ಮತ್ತವರ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಕೋರಿ ಬುಧವಾರ ಬಿಜೆಪಿ ಕಾರ್ಯಕರ್ತರು ತಾಲ್ಲೂಕು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.   

ಕಾರ್ಕಳ: ತಾಲ್ಲೂಕಿನ ಬೈಲೂರು ಉಮಿಕಲ್ ಬೆಟ್ಟದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ದೃಷ್ಟಿಯಿಂದ ಶಾಸಕ ವಿ. ಸುನಿಲ್ ಕುಮಾರ್ ಅವರ ಪರಿಕಲ್ಪನೆಯಂತೆ ಸ್ಥಾಪಿಸಲಾದ ಪರಶುರಾಮ ಮೂರ್ತಿಯ ಕುರಿತು ಅಪಪ್ರಚಾರ ಮಾಡಿದ ಕಾಂಗ್ರೆಸ್ ಮುಖಂಡ ಉದಯ ಕುಮಾ‌ರ್ ಶೆಟ್ಟಿ ಮತ್ತವರ ಬೆಂಬಲಿಗರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕೆಂದು ಕೋರಿ ಬಿಜೆಪಿ ಕಾರ್ಯಕರ್ತರು ಬುಧವಾರ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಸಮುದ್ರ ಮಟ್ಟದಿಂದ ಸುಮಾರು 500 ಅಡಿ ಎತ್ತರ ಪ್ರದೇಶದ ಬೆಟ್ಟದಲ್ಲಿರುವ ಪರಶುರಾಮ ಮೂರ್ತಿಯನ್ನು ಮತ್ತಷ್ಟು ಬಲವರ್ಧನೆ ಮಾಡುವ ಉದ್ದೇಶದಿಂದ ಮೂರ್ತಿಯ ಮರು ವಿನ್ಯಾಸ ಕಾರ್ಯಕ್ಕಾಗಿ ನಿರ್ಮಾಣ ಸಂಸ್ಥೆಯು ಜಿಲ್ಲಾಧಿಕಾರಿಗಳ ಅನುಮತಿ ಪಡೆದು ಮೂರ್ತಿಯನ್ನು ಥೀಮ್ ಪಾರ್ಕ್‌ನಿಂದ ಸ್ಥಳಾಂತರ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಪ್ರಸ್ತುತ ರಾಜ್ಯ ಸರ್ಕಾರದ ತನಿಖಾ ಸಂಸ್ಥೆಯು ಪರಶುರಾಮ ಥೀಂ ಪಾರ್ಕ್‌ನಲ್ಲಿರುವ ಮೂರ್ತಿಯ ಕುರಿತು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಪ್ರತಿಮೆಯನ್ನು ಫೈಬರ್‌ನಿಂದ ಮಾಡಿದ್ದಲ್ಲ ಎಂಬುದಾಗಿ ವರದಿಯಿದೆ. ಆದರೆ, ಪರಶುರಾಮ ಮೂರ್ತಿಯನ್ನು ಫೈಬರ್‌ನಿಂದ ಮಾಡಲಾಗಿದೆ ಹಾಗೂ ಕಳ್ಳತನ ಆಗಿದೆ ಎಂದು ಅಪಪ್ರಚಾರ ಮಾಡಿ ಕಾರ್ಕಳದ ಪ್ರವಾಸೋದ್ಯಮ ಹಾಗೂ ಕಾರ್ಕಳದ ಘನತೆಗೆ ಕಾಂಗ್ರೆಸ್‌ನವರು ಧಕ್ಕೆ ಉಂಟು ಮಾಡಿದ್ದಾರೆ ಎಂದು ಹೇಳಿದ್ದಾರೆ.

ADVERTISEMENT

ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್‌ ನಾಯಕ್‌, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಕಾರ್ಕಳ ಮಂಡಲ ಬಿಜೆಪಿ ಕಾರ್ಯದರ್ಶಿಗಳಾದ ಬೋಳ ಸತೀಶ್‌ ಪೂಜಾರಿ, ಸುರೇಶ್‌ ಶಿವಪುರ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ರಾಕೇಶ್‌ ಶೆಟ್ಟಿ, ಮಹಿಳಾ ಮೋರ್ಚಾ ಅಧ್ಯಕ್ಷೆ ವಿನಯ ಡಿ. ಬಂಗೇರ ಹಾಗೂ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

‘ಕಾರ್ಕಳದ ಘನತೆಗೆ ಧಕ್ಕೆ’

ಜಿಲ್ಲಾಡಳಿತದ ಆದೇಶವನ್ನು ಗಣನೆಗೆ ತೆಗೆದುಕೊಳ್ಳ ಉದಯ ಕುಮಾ‌ರ್ ಶೆಟ್ಟಿ ಮತ್ತವರ ಬೆಂಬಲಿಗರ ತಂಡ ಪ್ರತಿಮೆಯ ಕುರಿತು ಪತ್ರಿಕಾಗೋಷ್ಠಿಗಳಲ್ಲಿ ಸಭೆ ಸಮಾರಂಭಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿ ಕಾರ್ಕಳದ ಘನತೆಗೆ ಧಕ್ಕೆಯುಂಟು ಮಾಡಿದ್ದಾರೆ. ಬೇರೆ ಬೇರೆ ಸಂದರ್ಭದಲ್ಲಿ ಕ್ಷೇತ್ರದ ಶಾಸಕರು ಹಾಗೂ ಜಿಲ್ಲಾಡಳಿತ ಪ್ರತಿಮೆಯ ಕುರಿತು ಯಾವುದೇ ವ್ಯತ್ಯಾಸವಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದರೂ ಸಹ ವ್ಯವಸ್ಥಿತ ಪಿತೂರಿ ನಡೆಸಿ ಸಾರ್ವಜನಿಕ ವಲಯದಲ್ಲಿ ತಪ್ಪು ಸಂದೇಶ ನೀಡಲಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.