ಕಾರ್ಕಳ: ಬಿಜೆಪಿ ದೇಶದಲ್ಲಿ ಕೇಸರೀಕರಣ ಸಿದ್ಧಾಂತ ಜಾರಿಗೆ ತರಲು ಪಠ್ಯಪುಸ್ತಕ ಪರಿಷ್ಕರಣೆಗೆ ಮುಂದಾಗಿದೆ ಎಂದು ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಹೇಳಿದರು.
ಬಸ್ ನಿಲ್ದಾಣದ ಬಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಬುಧವಾರ ಕಾರ್ಕಳ ರಾಜ್ಯ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ಪಠ್ಯಪುಸ್ತಕ ಕೇಸರಿಕರಣ ವಿರುದ್ಧ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಅಗ್ನಿಪಥ ಯೋಜನೆಗೆ ಯುವಕರಿಂದಲೇ ವಿರೋಧಗಳಿವೆ. ಬಿಜೆಪಿ ಸುಳ್ಳು, ಮೋಸಗಳ ಮೂಲಕ ಜನರನ್ನು ದಾರಿ ತಪ್ಪಿಸುತ್ತಿದೆ.
ಪ್ರಧಾನಿ ಮೋದಿ ಭಾಷಣ, ಪ್ರದರ್ಶನಕ್ಕೆ ಸೀಮಿತವಾಗಿದ್ದಾರೆ. ಕಾಂಗ್ರೆಸ್
ಮೇಲೆ ಆರೋಪ ಮಾಡುತ್ತಿರುವ ಬಿಜೆಪಿಗೆ ಎಂಟು ವರ್ಷದಲ್ಲಿ ಒಂದು ಆರೋಪವನ್ನೂ ಸಾಬೀತು ಮಾಡಲು ಸಾಧ್ಯವಾಗಿಲ್ಲ. ಸುಳ್ಳು, ಮೋಸಗಳಿಂದ ದೇಶ ಆಳಲು ಸಾಧ್ಯವಿಲ್ಲ. ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತದೆ ಎಂದರು.
ಪಕ್ಷದ ಮುಖಂಡ ಶೇಖರ್ ಮಡಿವಾಳ ಮಾತನಾಡಿ ಮತ, ಧರ್ಮದಲ್ಲಿ ವಿಭಜನೆ ಮಾಡಿದ್ದ ಬಿಜೆಪಿ ಈಗ ಜಾತಿ ಆಧಾರದಲ್ಲಿ ವಿಭಜಿಸಲು ಹೊರಟಿದೆ. ನಾರಾಯಣ ಗುರು, ಬಸವಣ್ಣ, ಅಂಬೇಡ್ಕರ್, ಕುವೆಂಪು ಅವರಿಗೆ ಅವಮಾನ ಮಾಡಿ ಜಾತಿ ವಿಂಗಡಣೆಗೆ ಹೊರಟಿದೆ. ಪಕ್ಷದ ಒಳಗಿರುವ ನಾಯಕರು ಅಧಿಕಾರದಾಸೆಗೆ ಸಮರ್ಥನೆ ಮಾಡುತ್ತಿದ್ದಾರೆ ಎಂದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿದ ದೇವಾಡಿಗ ಮಾತನಾಡಿದರು. ಕಾಂಗ್ರೆಸ್ ನಗರಾಧ್ಯಕ್ಷ ಮಧುಕರ ಶೆಟ್ಟಿ, ಅಲ್ಪಸಂಖ್ಯಾಕ
ಘಟಕದ ಅಧ್ಯಕ್ಷ ಅಸ್ಲಾಂ, ಪ್ರಮುಖರಾದ ಸುಭಿತ್ ಎನ್. ಆರ್, ಪ್ರಭಾಕರ ಬಂಗೇರ, ಅಶ್ಫಕ್ ಅಹಮದ್, ಪ್ರತಿಮಾ ರಾಣೆ, ಸೋಮನಾಥ, ನವೀನ್ ದೇವಾಡಿಗ, ಹರೀಶ್, ಸತೀಶ್ ದೇವಾಡಿಗ ಮತ್ತಿತರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.