ಬೈಂದೂರು: ಗಂಗೊಳ್ಳಿಯಲ್ಲಿ ಭಾನುವಾರ ಮೀನುಗಾರಿಕೆಗೆ ತೆರಳುತ್ತಿದ್ದ ನಾಡದೋಣಿ ಬಂದರಿನ ಅಳಿವೆ ಬಳಿ ಮಗುಚಿಕೊಂಡಿದ್ದು, ಅದರಲ್ಲಿದ್ದ ನಾಲ್ವರು ಮೀನುಗಾರರು ಪಾರಾಗಿದ್ದಾರೆ.
ಮೀನುಗಾರಿಕಾ ಋತು ಆರಂಭವಾದ ದಿನವೇ ಈ ದುರ್ಘಟನೆ ನಡೆದಿದೆ. ಜಿ. ಪ್ರಕಾಶ್ ಮಾಲೀಕತ್ವದ ‘ಪರಾಶಕ್ತಿ’ ಎನ್ನುವ ಹೆಸರಿನ ದೋಣಿ, ಬಲೆ ತುಂಬಿಸಿಕೊಂಡು ಸಮುದ್ರ ಪ್ರವೇಶಿಸುವಾಗ ಅವಘಡ ನಡೆದಿದೆ. ಬಲೆ ನೀರಿನಲ್ಲಿ ಮುಳುಗಿ ನಷ್ಟ ಸಂಭವಿಸಿದೆ. ಹತ್ತಿರದಲ್ಲಿದ್ದ ದೋಣಿಯವರ ಸಹಕಾರದಿಂದ ಮಗುಚಿ ಬಿದ್ದ ದೋಣಿಯನ್ನು ದಡಕ್ಕೆ ಎಳೆದು ತರಲಾಗಿದೆ.
ಇಲ್ಲಿನ ಪ್ರಾಥಮಿಕ ಮೀನುಗಾರರ ಸಹಕಾರಿ ಸಂಘದ ಅಧ್ಯಕ್ಷ ಸದಾಶಿವ ಖಾರ್ವಿ ಈ ಬಗ್ಗೆ ಪ್ರತಿಕ್ರಿಯಿಸಿ, ‘ ಅಳಿವೆಯಲ್ಲಿ ತುಂಬಿರುವ ಹೂಳು ದೋಣಿಗಳಿಗೆ ಅಪಾಯ ಉಂಟುಮಾಡುತ್ತಿದೆ. ಕೆಲವು ವರ್ಷಗಳಿಂದ ಡ್ರೆಜಿಂಗ್ ಮಾಡಿ ಹೂಳು ತೆಗೆಯಬೇಕು ಎಂದು ಮೀನುಗಾರರು ಆಗ್ರಹಿಸುತ್ತಿದ್ದರೂ ಕ್ರಮ ಆಗಿಲ್ಲ. ಸಂಬಂಧಿಸಿದವರು ಇನ್ನಾದರೂ ಗಮನ ಹರಿಸಿ, ಅಳಿವೆಯಲ್ಲಿ ಡ್ರೆಜಿಂಗ್ ಮಾಡಿ ಹೂಳು ತೆಗೆದು ಆಳಗೊಳಿಸಬೇಕು. ಇಲ್ಲವಾದರೆ ಇಲ್ಲಿ ಇನ್ನಷ್ಟು ಅಪಾಯ ಸಂಭವಿಸಲಿದೆ’ ಎಂದು ಎಚ್ಚರಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.