ADVERTISEMENT

ಮಗುಚಿದ ದೋಣಿ: ಮೀನುಗಾರರು ಪಾರು

ತ್ರಾಸಿ: ದೋಣಿ, ಬಲೆ, ಎಂಜಿನ್ ಸಮುದ್ರ ಪಾಲು – ₹ 4.5 ಲಕ್ಷ ನಷ್ಟ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2021, 9:05 IST
Last Updated 6 ಸೆಪ್ಟೆಂಬರ್ 2021, 9:05 IST
ಮಗುಚಿ ಹಾನಿಗೊಳಗಾದ ಯಕ್ಷೇಶ್ವರಿ ಅನುಗ್ರಹ ದೋಣಿ
ಮಗುಚಿ ಹಾನಿಗೊಳಗಾದ ಯಕ್ಷೇಶ್ವರಿ ಅನುಗ್ರಹ ದೋಣಿ   

ಬೈಂದೂರು: ಕುಂದಾಪುರ ತಾಲ್ಲೂಕು ಹೊಸಾಡು ಗ್ರಾಮದ ಕಂಚುಗೋಡು ಮತ್ತು ತ್ರಾಸಿ ಗ್ರಾಮದ ಹೊಸಪೇಟೆ ಸಮೀಪ ಭಾನುವಾರ ಎರಡು ಮೀನುಗಾರಿಕಾ ದೋಣಿಗಳು ಮಗುಚಿದ ಪರಿಣಾಮ ಹಾನಿ ಉಂಟಾಗಿದ್ದು, ಮೀನುಗಾರರು ಪಾರಾಗಿದ್ದಾರೆ.

ಓಂಕಾರ್ ಪ್ರಸನ್ನ ಎಂಬ ಹೆಸರಿನ ದೋಣಿಯಲ್ಲಿ ಹೊಸಾಡು ಗ್ರಾಮದ ಕಂಚುಗೋಡಿನ ನಿವಾಸಿಗಳಾದ ರಾಮ ಖಾರ್ವಿ, ವಿನಯ ಖಾರ್ವಿ, ನಾಗರಾಜ ಖಾರ್ವಿ ಮೀನುಗಾರಿಕೆಗೆ ತೆರಳಿದ್ದರು. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬಂದ ಭಾರಿ ಗಾಳಿ ಮಳೆ ಮತ್ತು ಅಲೆಗಳ ಹೊಡೆತಕ್ಕೆ ದೋಣಿ ಮಗುಚಿದೆ. ಸಮೀಪದಲ್ಲಿ ಮಹಾಲಕ್ಷ್ಮೀ ಎಂಬ ಹೆಸರಿನ ದೋಣಿಯಲ್ಲಿ ಮೀನುಗಾರಿಕೆ ನಿರತರಾಗಿದ್ದ ವಿಘ್ನೇಶ ಖಾರ್ವಿ, ಪ್ರಮೋದ್ ಖಾರ್ವಿ, ದೇವದಾಸ್ ಖಾರ್ವಿ, ಶಿವರಾಜ್ ಖಾರ್ವಿ, ಅಂಬರೀಶ್ ಖಾರ್ವಿ ಮುಳುಗುತ್ತಿದ್ದ ದೋಣಿಯತ್ತ ಧಾವಿಸಿ ಬಂದು ಮೀನುಗಾರರನ್ನು ರಕ್ಷಣೆ ಮಾಡಿದ್ದಾರೆ. ದೋಣಿ, ಬಲೆ, ಎಂಜಿನ್, ಇತರ ಸಲಕರಣೆಗಳು ಮುಳುಗಿದ್ದು, ₹ 4.5 ಲಕ್ಷ ನಷ್ಟ ಸಂಭವಿಸಿದೆ.

ತ್ರಾಸಿ ಹೊಸಪೇಟೆಯಿಂದ ಮೀನುಗಾರಿಕೆಗೆ ತೆರಳಿದ್ದ ಯಕ್ಷೇಶ್ವರಿ ಅನುಗ್ರಹ ದೋಣಿಯಿಂದ ಸಮುದ್ರಕ್ಕೆ ಬಿದ್ದ ನಾಗ ಖಾರ್ವಿ, ನಿತ್ಯಾನಂದ ಖಾರ್ವಿ, ರೋಷನ್ ಖಾರ್ವಿ ಈಜಿ ದಡ ಸೇರಿದ್ದಾರೆ.

ADVERTISEMENT

ದೋಣಿಯಲ್ಲಿದ್ದ ಸಲಕರಣೆಗಳಿಗೆ ಹಾನಿ ಉಂಟಾಗಿದೆ. ದೋಣಿ ಬಂಡೆಗೆ ಬಡಿದು ದೋಣಿ ಮತ್ತು ಎಂಜಿನ್‌ಗೆ ಹಾನಿಯಾಗಿದೆ. ಗಂಗೊಳ್ಳಿ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.