ಉಡುಪಿ:ಡಿ.15ರಂದು ಮಹಾರಾಷ್ಟ್ರದ ಮಾಲ್ವಾನ್ ಸಮುದ್ರತೀರದಲ್ಲಿ ಅನಾಮಧೇಯ ಬೋಟ್ ದುರಂತಕ್ಕೀಡಾಗಿರುವ ಬಗ್ಗೆ ಅಲ್ಲಿನ ಮೀನುಗಾರರು ವೈರ್ಲೆಸ್ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಂದೇಶ ರವಾನಿಸಿದ್ದು ಯಾರು? ದುರಂತಕ್ಕೀಡಾದ ಬೋಟ್ ಯಾವುದು ಎಂಬ ಕುರಿತು ರಾಜ್ಯದ ಪೊಲೀಸರ ತಂಡ ಮಹಾರಾಷ್ಟ್ರ ಮೀನುಗಾರರನ್ನು ವಿಚಾರಣೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆನಾಪತ್ತೆಯಾಗಿರುವ ಮೀನುಗಾರರು ಸುರಕ್ಷಿತವಾಗಿ ಮರಳಲಿ ಎಂದು ಮೀನುಗಾರರು ಆರಾಧ್ಯ ದೈವ ಮಾಲ್ತಿದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಮಲ್ಪೆ ಸಮುದ್ರದ ಅಳಿವೆ ಬಾಗಿಲು ದ್ವೀಪ ಪ್ರದೇಶದಲ್ಲಿ ಮಾಲ್ತಿದೇವಿಯ ಶಕ್ತಿಸ್ಥಳವಿದ್ದು, ಮೀನುಗಾರರಿಗೆ ಸಂಕಷ್ಟ ಎದುರಾದಾಗ ಪ್ರಾರ್ಥಿಸುವುದು ಹಿಂದಿನಿಂದಲೂ ನಡೆದುಕೊಂಡುಬಂದಿರುವ ಪದ್ಧತಿ. ಅದರಂತೆ, ಮೀನುಗಾರರು ಸುರಕ್ಷಿತವಾಗಿ ಮರಳಲಿ ಎಂದು ದೇವಿಗೆ ಪ್ರಾರ್ಥಿಸಲಾಯಿತು. ದೈವ ಕೂಡ ಅಭಯ ನೀಡಿದೆ ಎಂದು ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ಸತೀಶ್ ಕುಂದರ್ ತಿಳಿಸಿದರು.
ಸ್ಥಳೀಯ ಮೀನುಗಾರರ ತಂಡ 2 ಬೋಟ್ಗಳಲ್ಲಿ ಶೋಧ ನಡೆಸುತ್ತಿದ್ದು, ಗೋವಾ ಹಾಗೂ ಮಹಾರಾಷ್ಟ್ರ ಗಡಿ ತಲುಪಿವೆ. ನಾಲ್ಕು ದಿನಗಳ ಕಾಲ ಅಲ್ಲಿನ ನದಿಗಳ ಹಿನ್ನೀರಿನಲ್ಲಿ ಶೋಧ ನಡೆಸಲಿದ್ದಾರೆ ಎಂದು ಕುಂದರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.