ADVERTISEMENT

ಸ್ವಉದ್ಯೋಗಕ್ಕೆ ತರಬೇತಿ ಸಹಕಾರಿ‌: ಡಾ.ಧನಂಜಯ

ಮೀನುಗಾರಿಕೆಯಲ್ಲಿ ಕೌಶಲಾಭಿವೃದ್ಧಿ ತರಬೇತಿ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2022, 4:39 IST
Last Updated 27 ಸೆಪ್ಟೆಂಬರ್ 2022, 4:39 IST
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಮಂಗಳೂರಿನ ಮೀನುಗಾರಿಕಾ ಕಾಲೇಜು ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿಯಿಂದ ನಡೆದ ತರಬೇತಿಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು.
ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಮಂಗಳೂರಿನ ಮೀನುಗಾರಿಕಾ ಕಾಲೇಜು ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿಯಿಂದ ನಡೆದ ತರಬೇತಿಯಲ್ಲಿ ತರಬೇತಿ ಪಡೆದ ಶಿಬಿರಾರ್ಥಿಗಳು.   

ಬ್ರಹ್ಮಾವರ: ವೈಜ್ಞಾನಿಕವಾಗಿ ಸಮತೋಲನವಾದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಮಾಡುವ ಈ ತರಬೇತಿ ಇಂದು ಅಗತ್ಯ ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಧನಂಜಯ ಬಿ. ಹೇಳಿದರು.

ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಮಂಗಳೂರಿನ ಮೀನುಗಾರಿಕಾ ಕಾಲೇಜು ಮತ್ತು ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ದಿ ಮಂಡಳಿಯಿಂದ ಪ್ರಾಯೋಜಿತ ಐದು ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತರಬೇತಿಯು ಸ್ವ ಉದ್ಯೋಗಿಗಳಾಗಲು ಸುಲಭೋಪಾಯದ ಮಾರ್ಗವಾಗಿದ್ದು, ಪ್ರತಿಯೊಬ್ಬರು ನಿರುದ್ಯೋಗ ಸಮಸ್ಯೆಯಿಂದ ದೂರವಾಗಲು ಸಾಧ್ಯ. ಇಂತಹ ತರಬೇತಿಗಳಿಂದ ಸಾಮಾನ್ಯ ಜನರ ಜೀವನೋಪಾಯ ಉತ್ತಮವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಹೇಳಿದರು.

ADVERTISEMENT

ಬ್ರಹ್ಮಾವರ ಡಿಪ್ಲೊಮಾ ಕೃಷಿ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಸುಧೀರ್ ಕಾಮತ್ ಕೆ. ಕಾರ್ಯಕ್ರಮ ಉದ್ಘಾಟಿಸಿ, ‘ಕೃಷಿ ಉಪಉತ್ಪನ್ನಗಳ ತಯಾರಿಕೆಯಲ್ಲಿ ಶಿಬಿರಾರ್ಥಿಗಳು ತೊಡಗಿಸಿಕೊಂಡರೆ ಉದ್ಯಮಶೀಲರಾಗಲು ಸಹಕಾರಿ’ ಎಂದರು.

ಮೀನುಗಾರಿಕಾ ಕಾಲೇಜಿನ ಪ್ರಾಧ್ಯಾಪಕ ಹಾಗೂ ತರಬೇತಿಯ ಸಂಯೋಜಕ ಡಾ.ಎ.ಟಿ.ರಾಮಚಂದ್ರ ನಾಯ್ಕ ಮಾತನಾಡಿ, ಮೀನುಗಾರಿಕೆ ಕ್ಷೇತ್ರದಲ್ಲಿ ವಿವಿಧ ವಿಷಯಗಳಲ್ಲಿ ಬೇಡಿಕೆಯ ಆಧಾರದ ಮೇಲೆ ಯುವಕ-ಯುವತಿಯರಿಗೆ, ಮಹಿಳೆಯರಿಗೆ, ನಿರುದ್ಯೋಗಿಗಳಿಗೆ ಮತ್ತು ವ್ಯಾಸಂಗ ಮೊಟಕುಗೊಳಿಸಿದವರಿಗೆ ಈ ರೀತಿಯ ತರಬೇತಿಗಳು ಉದ್ಯಮಶೀಲರಾಗಲು ಸಹಕಾರಿಯಾಗುತ್ತದೆ ಎಂದು ಹೇಳಿದರು.

ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಮತ್ಸ್ಯ ವಿಜ್ಞಾನಿ ಡಾ.ಶ್ರೀನಿವಾಸ ಎಚ್. ಹುಲಕೋಟಿ, ಬೆಳ್ತಂಗಡಿಯ ಸ್ನೇಹ ಸಂಜೀವಿನಿ ಒಕ್ಕೂಟದ ಸದಸ್ಯರಾದ ಸಾವಿತ್ರಿ ಕೃಷ್ಣಪ್ಪ, ಸಾಹಿದಾ ಬೇಗಂ, ನಸೀಮ ಮತ್ತು ಹರ್ಷಿಯ ಪ್ರಾತ್ಯಕ್ಷಿಯ ಮೂಲಕ ಮಾಹಿತಿ ನೀಡಿದರು.

ಮಂಗಳೂರಿನ ಮೀನುಗಾರಿಕಾ ಕಾಲೇಜು, ಬ್ರಹ್ಮಾವರದ ಕೃಷಿ ವಿಜ್ಞಾನ ಕೇಂದ್ರ ಹಾಗೂ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಮತ್ತು ಸಂಜೀವಿನಿ ಸ್ವಸಹಾಯ ಸಂಘದ ವತಿಯಿಂದ ನಡೆಸಲಾದ ಮೀನುಗಾರಿಕೆಯಲ್ಲಿ ಕೌಶಲಾಧಾರಿತ ತರಬೇತಿಯನ್ನು ಪರಿಶಿಷ್ಟ ಜಾತಿಯ ಸಮುದಾಯದವರಿಗೆ ಆಯೋಜಿಲಾಗಿತ್ತು.

ತರಬೇತಿಯಲ್ಲಿ ಮಾಹಿತಿಯ ಜೊತೆಗೆ, ವಿವಿಧ ಪದಾರ್ಥಗಳನ್ನು ತಯಾರಿಸಲಾಯಿತು. ಅವುಗಳಲ್ಲಿ, ಸಿಗಡಿಯ ಉಪ್ಪಿನಕಾಯಿ, ಸಿಗಡಿ ಚಟ್ನಿಪುಡಿ, ಮೀನಿನ ಚಕ್ಕುಲಿ, ಮೀನಿನ ಕೋಡುಬಳೆ, ಮೀನಿನ ಕಟ್ಲೆಟ್, ಮೀನಿನ ಸಂಡಿಗೆ, ಮೀನಿನ ಹಪ್ಪಳ, ಮೀನಿನ ಬಿರಿಯಾನಿ ಪ್ರಮುಖವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.