ಉಡುಪಿ: ಬಾಲ್ಯದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ಶನಿವಾರ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜು, ಕೆಎಂಸಿ, ಆಂಕೊಲಜಿ ವಿಭಾಗ, ಮಕ್ಕಳ ರಕ್ತಶಾಸ್ತ್ರ ವಿಭಾಗ ಹಾಗೂ ಆಕ್ಸೆಸ್ ಲೈಫ್ ಅಸಿಸ್ಟೆನ್ಸ್ ಫೌಂಡೇಶನ್ ಸಹಯೋಗದಲ್ಲಿ ಮೇಣದಬತ್ತಿನಡಿಗೆ ನಡೆಯಿತು.
ವಿಭಾಗದ ಮುಖ್ಯಸ್ಥ ಡಾ.ವಾಸುದೇವ ಭಟ್ ಕಾರ್ಯಕ್ರಮದಲ್ಲಿ ಮಾತನಾಡಿ, ‘ಭಾರತದಲ್ಲಿ ಪ್ರತಿ ವರ್ಷ 78,000ದಷ್ಟು ಮಕ್ಕಳು ಕ್ಯಾನ್ಸರ್ನಿಂದ ಬಳಲುತ್ತಾರೆ. ವಿಳಂಬ ರೋಗ ಪತ್ತೆ, ತಡವಾದ ಚಿಕಿತ್ಸೆ ಕಾರಣಕ್ಕೆ ಕ್ಯಾನ್ಸರ್ ಒಂದು ಕಳಂಕಿತ ರೋಗ ಎಂಬ ಹಣೆಪಟ್ಟಿ ಹೊಂದಿದ್ದು, ಕಾಯಿಲೆಯಿಂದ ಗುಣಮುಖರಾಗುವವರ ದರವೂ ಕಡಿಮೆ ಇದೆ ಎಂದರು.
ಮಣಿಪಾಲದ ಕಸ್ತೂರಬಾ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರತ್ ಕುಮಾರ್ ಬಾಲ್ಯದ ಕ್ಯಾನ್ಸರ್ ಜಾಗೃತಿ ಕರಪತ್ರ ಬಿಡುಗಡೆಗೊಳಿಸಿ, ‘ಚಿನ್ನ ಅಮೂಲ್ಯವಾದ ಲೋಹವಾಗಿರುವ ಕಾರಣ ಸಾಂಕೇತಿಕವಾಗಿ ಆಸ್ಪತ್ರೆಯ ಆವರಣವನ್ನು ಚಿನ್ನದ ಬೆಳಕಿನಿಂದ ಬೆಳಗಿಸಲಾಗಿದೆ. ಜೀವನದಲ್ಲಿ ಮಕ್ಕಳು ಅತ್ಯಮೂಲ್ಯ ವಸ್ತು ಎಂಬುದನ್ನು ಮರೆಯಬಾರದು ಎಂದರು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ‘ಆಸ್ಪತ್ರೆಯು ಕ್ಯಾನ್ಸರ್ ಪೀಡಿತ ಮಕ್ಕಳಿಗೆ ಗುಣಮಟ್ಟದ ಚಿಕಿತ್ಸೆ ಹಾಗೂ ಸಮಗ್ರ ಆರೈಕೆ ನೀಡುತ್ತಿದೆ ಎಂದರು.
ಮೇಣದ ಬತ್ತಿ ನಡಿಗೆಯು ಕಸ್ತೂರಬಾ ವೈದ್ಯಕೀಯ ಕಾಲೇಜಿನ ಮುಖ್ಯ ದ್ವಾರದಿಂದ ಟೈಗರ್ ಸರ್ಕಲ್ ಮೂಲಕ ಆಕ್ಸೆಸ್ ಲೈಫ್ ಮಾಹೆವರೆಗೂ ನಡೆಯಿತು. ಆರೋಗ್ಯ ಕಾರ್ಯಕರ್ತರು ಮತ್ತು ಸ್ವಯಂಸೇವಕರು ಭಾಗವಹಿಸಿ ಕ್ಯಾನ್ಸರ್ನಿಂದ ಬಳಲುತ್ತಿರುವ ಮಕ್ಕಳು ಮತ್ತು ಅವರನ್ನು ಆರೈಕೆ ಮಾಡುವವರಿಗೆ ಬೆಂಬಲ ಸೂಚಿಸುವ ಭಾಗವಾಗಿ ಮೇಣದ ಬತ್ತಿ ಪ್ರದರ್ಶಿಸಿದರು.
ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಎಂ.ವಿ.ಅರ್ಚನಾ ಕಾರ್ಯಕ್ರಮ ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.