ADVERTISEMENT

ಕಾಪು: ಮದುವೆಗೆ ಪಡೆದ ಕಾರು, ವಾಪಾಸ್‌ ಕೊಡದೆ ಮೋಸ

​ಪ್ರಜಾವಾಣಿ ವಾರ್ತೆ
Published 22 ಜುಲೈ 2022, 5:04 IST
Last Updated 22 ಜುಲೈ 2022, 5:04 IST

ಕಾಪು: ಮದುವೆ ಸಂದರ್ಭದಲ್ಲಿ ಬಳಸಿಕೊಳ್ಳಲು ಸ್ನೇಹಿತನಿಂದ ಪಡೆದ ಕಾರನ್ನು ವಾಪಾಸ್‌ ಕೊಡದೆ ವಂಚಿಸಿರುವ ಬಗ್ಗೆ ಕಾಪು ಠಾಣೆಯಲ್ಲಿ ನ್ಯಾಯಾಲಯದ ಖಾಸಗಿ ದೂರಿನಂತೆ ಪ್ರಕರಣವೊಂದು ದಾಖಲಾಗಿದೆ.

ಕಟಪಾಡಿಯ ಮೂಡಬೆಟ್ಟುವಿನ ಪ್ರಾನ್ಸಿಸ್ ಕಿರಣ ಲಸ್ರಾದೊ ಎಂಬುವರು ಮದುವೆ ಸಂದರ್ಭದಲ್ಲಿ ಅಗತ್ಯವಿದ್ದರೆ ಬಳಸಿಕೊಳ್ಳಿ ಎಂದು ತಮ್ಮ ಸ್ನೇಹಿತ ಅಮೀರ್‌ ಸಾಹೇಬ್‌ಗೆ ತಮ್ಮ ಕಾರನ್ನು ಕೊಟ್ಟಿದ್ದರು.

ಒಂದು ತಿಂಗಳ ನಂತರ ಕಾರನ್ನು ವಾಪಸ್‌ ಕೊಡುವಂತೆ ಹೇಳಿದಾಗ, ಮುಂಬೈಗೆ ಹೋಗಿಬರಲು ಕಾರಿನ ಅಗತ್ಯವಿರುವುದಾಗಿ ತಿಳಿಸಿ, ಸ್ವಲ್ಪ ಹಣವನ್ನೂ ಕೊಟ್ಟು ವಾಪಸ್‌ ಕಳುಹಿಸಿದ್ದರು. ಆದರೆ, ಮುಂಬೈ, ಬೆಂಗಳೂರಿಗೆ ಹೋಗಿ ಬಂದ ನಂತರವೂ ಕಾರನ್ನು ವಾಪಸ್‌ ಕೊಟ್ಟಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ, ಕಾರು ಬೆಂಗಳೂರಿನಲ್ಲಿರುವ ಸ್ನೇಹಿತರೊಬ್ಬರ ಮನೆಯಲ್ಲಿ ಇರುವುದಾಗಿ ತಿಳಿಸಿದ್ದರು.

ADVERTISEMENT

ಕೊನೆಗೆ ಒಂದು ದಿನ ಅಮೀರ್ ಮನೆಗೇ ಹೋಗಿ ವಿಚಾರಿಸಿದಾಗ, ಸಿದ್ದೀಕ್‌ ಎಂಬುವರ ಜತೆಗೆ ಅಮೀರ್ ಹಣಕಾಸಿನ ವ್ಯವಹಾರ ಇಟ್ಟುಕೊಂಡಿದ್ದರು. ಸಿದ್ದೀಕ್‌ ಅವರಿಂದ ಪಡೆದ ಹಣವನ್ನು ಮರಳಿಸದ ಕಾರಣಕ್ಕೆ ಅವರು ಅಮೀರ್‌ ಮನೆಯಲ್ಲಿದ್ದ ಕಾರನ್ನು ತೆಗೆದುಕೊಂಡು ಹೋಗಿದ್ದರು. ಕಾರು ಮಂಗಳೂರಿನ ಕೋಟೆಕಾರ್ ಬಳಿ ಇದೆ ಎಂಬುದು ತಿಳಿದುಬಂದಿತ್ತು. ಸಾಲದ ಹಣವನ್ನು ಮರುಪಾವತಿ ಮಾಡಿದ ನಂತರ ಕಾರು ಮರಳಿಸುವುದಾಗಿ ಸಿದ್ದೀಕ್‌ ತಿಳಿಸಿರುವುದಾಗಿ ಅಮೀರ್‌ ಮಾಹಿತಿ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.