ಉಡುಪಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮಾಚರಣೆ, ಸ್ವಾತಂತ್ರ್ಯಕ್ಕಾಗಿ ಹೋರಾಡಿ ಮಡಿದವರ ಸ್ಮರಣೆ ಮಾಡಲು ಆ.13 ಹಾಗೂ 14ರಂದು ಬೈಕ್ ರ್ಯಾಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ವಿನಯ ಕುಮಾರ ಸೊರಕೆ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಪಿಸಿಸಿ ಸೂಚನೆಯಂತೆ ಆ.5ರಿಂದ 10ರವರೆಗೆ ಜಿಲ್ಲೆಯಾದ್ಯಂತ 75 ಕಿ.ಮೀ ಪಾದಯಾತ್ರೆಯನ್ನು ಯಶಸ್ವಿಯಾಗಿ ಮುಗಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 15 ಕಿ.ಮೀ ಪಾದಯಾತ್ರೆ ಮಾಡಲಾಗಿದ್ದು, 78 ಕಿ.ಮೀ ಕ್ರಮಿಸಲಾಗಿದೆ. ಇದರ ಬೆನ್ನಲ್ಲೇ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ವಿವರ ನೀಡಿದರು.
ಆ.13ರಂದು ಮಧ್ಯಾಹ್ನ 3ಕ್ಕೆ ಕಾಪು ತಾಲ್ಲೂಕಿನ ಹೆಜಮಾಡಿಯಲ್ಲಿ ಆರಂಭವಾಗಲಿರುವ ಬೈಕ್ ರ್ಯಾಲಿ ಉದ್ಯಾವರದಲ್ಲಿ ಸಮಾಪನಗೊಳ್ಳಲಿದೆ. ಆ.14ರಂದು ಕುಕ್ಕೆಹಳ್ಳಿಯಲ್ಲಿ ಆರಂಭವಾಗುವ ರ್ಯಾಲಿ ಪೆರ್ಡೂರು ಮಾರ್ಗವಾಗಿ, ಭೈರಂಪಳ್ಳಿ, ಬೊಮ್ಮರಬೆಟ್ಟು, ಪರ್ಕಳ, ಆತ್ರಾಡಿ, ಬಡಗಬೆಟ್ಟು ಮೂಲಕ ಅಲೆವೂರಿನಲ್ಲಿ ಸಮಾಪನಗೊಳ್ಳಲಿದೆ. 1000 ಮಂದಿ ರ್ಯಾಲಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು 1500 ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಬೈಕ್ ರ್ಯಾಲಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ಅಭಯ್ಚಂದ್ರ ಜೈನ್ ಭಾಗವಹಿಸಲಿದ್ದಾರೆ. ಮುಖಂಡರಾದ ಮಿಥುನ್ ರೈ ಹಾಗೂ ಐವನ್ ಡಿಸೋಜಾ ಅವರಿಗೆ ಭಾಗವಹಿಸಲು ಮನವಿ ಮಾಡಲಾಗಿದೆ. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಮನೆ ಮನೆಯಲ್ಲಿ ರಾಷ್ಟ್ರಧ್ವಜಾರೋಹಣಕ್ಕೆ ಸಾರ್ವಜನಿಕರನ್ನು ಹುರಿದುಂಬಿಸಲಾಗುವುದು. ಸಂವಿಧಾನ, ಜಾತ್ಯತೀತತೆ, ಪ್ರಜಾಪ್ರಭುತ್ವದ ಮೌಲ್ಯಗಳನ್ನು ತಿಳಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಾಗೇಶ್ ಉದ್ಯಾವರ, ಹರೀಶ್ ಕಿಣಿ, ಚರಣ್, ನವೀನ್ ಸಾಲ್ಯಾನ್, ಸಮತೋಷ್ ಕುಮಾರ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.