ಉಡುಪಿ: ಅದಮಾರು ಮಠದ ಹಿರಿಯ ವಿಶ್ವಪ್ರಿಯ ಹಾಗೂ ಕಿರಿಯ ಈಶಪ್ರಿಯ ಸ್ವಾಮೀಜಿ ತಮ್ಮ ಮುಂದಿನ ಪರ್ಯಾಯದ ಅವಧಿಯಲ್ಲಿ ರೈತರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಮಹತ್ತರ ಯೋಜನೆಯನ್ನು ಕೈಗೆತ್ತಿಕೊಂಡಿದ್ದಾರೆ.
2020 ಜ.18ರಂದು ನಡೆಯಲಿರುವ ಪರ್ಯಾಯ ಮಹೋತ್ಸವ ಸಂದರ್ಭ ಮಠಕ್ಕೆ ಅಗತ್ಯವಿರುವಷ್ಟು ಅಕ್ಕಿ, ತರಕಾರಿ, ಬಾಳೆ ಹಣ್ಣು, ಬಾಳೆಎಲೆಗಳನ್ನು ಮಧ್ಯವರ್ತಿಗಳಿಂದ ಖರೀದಿಸದೆ ನೇರವಾಗಿ ರೈತರಿಂದಲೇ ಪಡೆಯುವ ಕಾರ್ಯಕ್ಕೆ ಕೈಹಾಕಿದ್ದಾರೆ. ಅದಮಾರು ಮಠದ ಶ್ರೀಗಳ ಸಂಕಲ್ಪಕ್ಕೆ ರೈತರು ಕೂಡ ಕೈಜೋಡಿಸಿದ್ದು, ಬೆಳೆದ ಬೆಳೆಯನ್ನು ನೇರವಾಗಿ ಮಠಕ್ಕೆ ತಂದು ನೀಡಲಿದ್ದಾರೆ.
ಅದಮಾರು ಮಠದ ಕಿರಿಯ ಈಶಪ್ರಿಯ ತೀರ್ಥ ಸ್ವಾಮೀಜಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಎಲ್ಲ ಕಾರ್ಯಗಳ ಉಸ್ತುವಾರಿಗೆ ಮಠದ ಶಿಷ್ಯರನ್ನೊಳಗೊಂಡ ಆನಂದ ಸಮಿತಿಯನ್ನು ರಚಿಸಲಾಗಿದೆ. ಸಮಿತಿಯ ಮೂಲಕ ಪೆರ್ಡೂರು ಸಮೀಪದ ಚಾರ ಗ್ರಾಮದ ಹಂದಿಕಲ್ಲು ಎಂಬಲ್ಲಿ ಸುಮಾರು 10 ಎಕರೆ ಜಮೀನಿನಲ್ಲಿ ಬಾಳೆ ತೋಟ ಮಾಡಿ, ಅದಮಾರು ಮಠದ ಪರ್ಯಾಯೋತ್ಸವಕ್ಕೆ ಅಗತ್ಯವಿರುವ ಬಾಳೆ ಎಲೆ, ಬಾಳೆ ಹಣ್ಣನ್ನು ಬಳಕೆ ಮಾಡಿಕೊಳ್ಳಲಾಗುವುದು. ಈ ಕಾರ್ಯಕ್ಕೆ ಚಾರದ ವಿವೇಕಾನಂದ ಬಳಗ ಮುಂದೆ ಬಂದಿದೆ ಎಂದು ಹೇಳಿದರು.
ಪರ್ಯಾಯ ಸಂದರ್ಭದಲ್ಲಿ ಕೃಷ್ಣ ಮಠದಲ್ಲಿ ನಿತ್ಯದ ಅನ್ನಪ್ರಸಾದಕ್ಕೆ ಅಗತ್ಯವಿರುವ ಅಕ್ಕಿಗಾಗಿ, ಭತ್ತದ ಬೆಳೆಯನ್ನೂ, ತರಕಾರಿಯನ್ನೂ ಬೆಳೆಸುವ ಉದ್ದೇಶವನ್ನು ಆನಂದ ಸಮಿತಿ ಹೊಂದಿದೆ. ಸಾವಯವ ಕೃಷಿಗೆ ಒತ್ತು ನೀಡುವ ಮೂಲಕ, ಗೋವುಗಳನ್ನು ಸಾಕುವುದಕ್ಕೂ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.