ಉಡುಪಿ: ಕರಾವಳಿಯ ಭೂತರಾಧನೆ ಹಾಗೂ ನಾಗಾರಾಧನೆ ನೈಜತೆಯನ್ನು ಕಳೆದುಕೊಂಡು, ಆಡಂಬರ ಕಡೆ ಮುಖ ಮಾಡುತ್ತಿರುವುದು ವಿಷಾದನೀಯ ಎಂದು ಬಾಕೂರು ಸಂಸ್ಥಾನದ ಸಂತೋಷ್ ಗುರುಜೀ ಆತಂಕ ವ್ಯಕ್ತಪಡಿಸಿದರು.
ಜಾಗತಿಕ ಬಂಟ ಸಂಘಗಳ ಒಕ್ಕೂಟ, ಉಡುಪಿ ಬಂಟರ ಸಂಘಗಳ ಸಹಯೋಗದಲ್ಲಿ ಭಾನುವಾರ ನಗರದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾ ಭವನದಲ್ಲಿ ಆಯೋಜಿಸಿದ್ದ ವಿಶ್ವ ಬಂಟರ ಸಮ್ಮೇಳ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭೂತಾರಾಧನೆ, ನಾಗಾರಾಧನೆಯಲ್ಲಿ ಹಳಿ ತಪ್ಪುತ್ತಿದೆ. ನೈಜವಾಗಿ ಮಾಡಬೇಕಾದದ್ದನ್ನು ಆಡಂಬರವಾಗಿ ಮಾಡಲಾಗುತ್ತಿದೆ. ಇದನ್ನು ನಿಲ್ಲಿಸಬೇಕು. ಇದಕ್ಕೆ ಬಳಸುವ ಹಣವನ್ನು ಬಡ ಜನರ ಆರೋಗ್ಯಕ್ಕೆ ವ್ಯಯಿಸಬೇಕು ಎಂದು ಹೇಳಿದರು.
ಬಂಟ ಸಮುದಾಯದಲ್ಲಿ ಶೇ. 10ರಷ್ಟು ಮಾತ್ರ ಶ್ರೀಮಂತರಿದ್ದಾರೆ. ಶೇ. 40ರಷ್ಟು ಜನರು ಮಾಧ್ಯಮ ವರ್ಗದವರಾಗಿದ್ದಾರೆ. ಉಳಿದ ಶೇ. 50ರಷ್ಟು ಮಂದಿ ಬಡವರಾಗಿದ್ದಾರೆ. ಕರಾವಳಿಯಲ್ಲಿ ಪ್ರತಿ ವರ್ಷ ನಡೆಯುವ ಧಾರ್ಮಿಕ ಕಾರ್ಯಗಳಿಗೆ ₹30 ಕೋಟಿ ಖರ್ಚಾಗುತ್ತಿದೆ. ಇದರಲ್ಲಿ ಬಹುತೇಕ ಪಾಲು ಬಂಟ ಸಮಾಜದ್ದು. ನಾಗಮಂಡಲೋತ್ಸವವನ್ನು ಕೋಟಿಗಟ್ಟಲೇ ವೆಚ್ಚದಲ್ಲಿ ಆಡಂಬರವಾಗಿ ಮಾಡುವುದು ಬಿಡಬೇಕು. ₹10 ಲಕ್ಷದೊಳಗೆ ನಾಗಮಂಡಲವನ್ನು ಮಾಡಬಹುದು. ಹಾಗಾಗಿ ಅದ್ಧೂರಿಯಾಗಿ ನಾಗಮಂಡಲ ಸೇವೆ, ದೇವಸ್ಥಾನಕ್ಕೆ ಚಿನ್ನದ ಹೊದಿಕೆಗಳ ಮೇಲೆ ಹಣ ವ್ಯಯಿಸುವುದನ್ನು ನಿಲ್ಲಿಸಿ.ಅದಕ್ಕೆ ಬಳಸುವ ಹಣವನ್ನು ಆಸ್ಪತ್ರೆಯನ್ನು ನಿರ್ಮಿಸಬೇಕು. ಆ ಮೂಲಕ ಬಡಜನರ ಆರೋಗ್ಯಕ್ಕೆ ಸೇವೆಗೆ ಮುಂದಾಗಬೇಕು ಎಂದರು.
ಬಂಟ ಸಮಾಜ ಗಟ್ಟಿಯಾಗಬೇಕು. ಆಗ ಉಳಿದ ಸಮಾಜವೂ ಗಟ್ಟಿಯಾಗುತ್ತದೆ. ಆ ಮೂಲಕ ಹಿಂದೂ ಧರ್ಮದ ರಕ್ಷಣೆಯಾಗುತ್ತದೆ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.