ಶಿರ್ವ: ಕೋವಿಡ್ ಮಹಾಮಾರಿ ವಿಶ್ವದೆಲ್ಲೆಡೆ ವ್ಯಾಪಿಸಿದ್ದು, ಸೋಂಕು ಹರಡದಂತೆ ತಡೆಯುವ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇಲ್ಲೊಬ್ಬ ಕಲಾವಿದ ಬಾಲಕ ಆವೆಮಣ್ಣಿನ ಕಲಾಕೃತಿಯನ್ನು ರಚಿಸಿ ಗಮನ ಸೆಳೆದಿದ್ದಾನೆ.
ಕಟಪಾಡಿಯ ರಂಗಕಲಾವಿದ ನಾಗೇಶ್ ಕಾಮತ್ ಅವರ ಪುತ್ರ ಪ್ರಥಮ್ ಕಾಮತ್ ಆಮೆಮಣ್ಣಿನ ಕಲಾಕೃತಿಯಲ್ಲಿ ಕೋವಿಡ್–19 ವೈರಸ್ ಮಾದರಿಗಳನ್ನು ರಚಿಸಿ ಪಿಡುಗನ್ನು ಒದ್ದೋಡಿಸುವ ನಿಟ್ಟಿನಲ್ಲಿ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂಬುದಾಗಿ ಮಾನವ ಸಂಕುಲಕ್ಕೆ ಸಂದೇಶ ನೀಡಿದ್ದಾನೆ. ಕಟಪಾಡಿ ಎಸ್.ವಿ.ಕೆ. ಇಂಗ್ಲಿಷ್ ಮಾಧ್ಯಮ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ಕಲಿಯುತ್ತಿರುವ ಪ್ರಥಮ್ ಲಾಕ್ಡೌನ್ ಸಮಯದಲ್ಲಿ ಆವೆಮಣ್ಣಿನ ಕಲಾಕೃತಿಗಳನ್ನು ತನ್ನದೇ ವಿಶಿಷ್ಟ ಕಲ್ಪನೆಯಿಂದ ರಚಿಸಿ ಜನಮೆಚ್ಚುಗೆ ಗಳಿಸಿದ್ದಾನೆ.
ಬೇಸಿಗೆ ರಜೆಯಲ್ಲಿ ಮೊಬೈಲ್ ಹಿಡಿದುಕೊಂಡು ಗೇಮ್ ಆಡುತ್ತಾ ಕಾಲಹರಣ ಮಾಡುವ ಮಕ್ಕಳಿಗೆ ತನ್ನ ಕಲಾಪ್ರತಿಭೆಯ ಮೂಲಕ ಈ ಹುಡುಗ ಮಾದರಿಯಾಗಿದ್ದಾನೆ. ಈ ಪೋರನ ಕೋವಿಡ್ ಜಾಗೃತಿಯ ಆವೆಮಣ್ಣಿನ ಕಲಾಕೃತಿ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ವೈರಲ್ ಆಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.