ಉಡುಪಿ: ಸರ್ಕಾರ ಘೋಷಿಸಿರುವ ಕೋವಿಡ್ ಪ್ಯಾಕೆಜ್ ಅರೆ ಬರೆಯಾಗಿದ್ದು, ಅರೆ ಬರೆ ಲಾಕ್ಡೌನ್ ಮಾದರಿಯಲ್ಲಿದೆ. ಕೋವಿಡ್ ಸಂಕಷ್ಟದಲ್ಲಿ ಜನರ ಜೀವನ ಉಳಿಸಲು ಇದು ಸಾಲದು ಎಂದು ಸಿಪಿಐ ಎಂ ಜಿಲ್ಲಾ ಸಮಿತಿ ಅಭಿಪ್ರಾಯಪಟ್ಟಿದೆ.
ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಖಾಸಗಿ ಬಸ್ ನೌಕರರು, ಹೆಂಚು ಕಾರ್ಮಿಕರು, ಬೀಡಿ ಕಾರ್ಮಿಕರಿದ್ದು ಅವರಿಗೆ ಯಾವುದೇ ಪರಿಹಾರ ಘೋಷಿಸಿಲ್ಲ. ಆದಾಯ ತೆರಿಗೆಯಿಂದ ಹೊರಗಿರುವ ರಾಜ್ಯದ ಪ್ರತಿ ಕುಟುಂಬಕ್ಕೆ ಮಾಸಿಕ ₹ 10000ವನ್ನು ಕನಿಷ್ಠ 6 ತಿಂಗಳು ನೀಡಬೇಕು. ಪ್ರತಿ ಕುಟುಂಬಕ್ಕೆ 10 ಕೆಜಿ ಉಚಿತ ಪಡಿತರ ನೀಡಬೇಕು. ಉದ್ಯೋಗ ಖಾತ್ರಿ ಕೂಲಿಯನ್ನು ₹ 600 ಕ್ಕೆ ಹೆಚ್ಚಿಸಿ, 200 ದಿನಗಳಿಗೆ ಏರಿಸಬೇಕು.
₹1111.82 ಕೋಟಿಯನ್ನು ವಿವಿಧ ಇಲಾಖೆಗಳ ಮೂಲಕ ನೀಡುತ್ತಿದ್ದು ಕಟ್ಟಡ ಕಾರ್ಮಿಕರಿಗೆ ₹ 494 ಕೋಟಿ ರೂಪಾಯಿಗಳನ್ನು ಕಲ್ಯಾಣ ಮಂಡಳಿಯಿಂದ ನೀಡಲಾಗುತ್ತಿದೆ. ಅಂದರೆ ಸರ್ಕಾರಿ ಬೊಕ್ಕಸದಿಂದ ನೀಡುತ್ತಿರುವುದು ಕೇವಲ ₹ 618 ಕೋಟಿ ಮಾತ್ರ ಎಂದು ಟೀಕಿಸಿದ್ದಾರೆ.
ಪ್ರಸಕ್ತ ಪ್ಯಾಕೇಜ್ ಕೋವಿಡ್ 2ನೇ ಅಲೆಯ ವ್ಯಾಪಕತೆ, ಸಾವು ನೋವಿನ ಪ್ರಮಾಣಕ್ಕೆ ಅನುಗುಣವಾಗಿಲ್ಲ. ಮೂಗಿಗೆ ತುಪ್ಪ ಸವರು ವ ಪ್ಯಾಕೇಜ್ಆಗಿದೆ. ಮೇ 21 ರಂದು ರಾಜ್ಯದ ಕಾಮಿ೯ಕರು, ರೈತರು ಮತ್ತು ಕೂಲಿಕಾರರು ಮನೆಯಿಂದಲೇ ಪ್ರತಿಭಟನೆ ಪ್ರತಿರೋಧ ತೋರುತ್ತಿದ್ದು, ಸಿಪಿಐ(ಎಂ) ಜಿಲ್ಲಾ ಸಮಿತಿ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.