ADVERTISEMENT

ಮುಂಡ್ಕೂರು: ಚಿರತೆ ದಾಳಿ, ವ್ಯಕ್ತಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2022, 5:59 IST
Last Updated 10 ಸೆಪ್ಟೆಂಬರ್ 2022, 5:59 IST

ಕಾರ್ಕಳ: ತಾಲ್ಲೂಕಿನ ಮುಂಡ್ಕೂರು ಮುಲ್ಲಡ್ಕದ ನಾನಿಲ್ತಾರ್ ಎಂಬಲ್ಲಿ ಕೃಷ್ಣ ಶೆಟ್ಟಿ ಎನ್ನುವವರ ಮೇಲೆ ಚಿರತೆಯೊಂದು ದಾಳಿ ನಡೆಸಿದೆ.

ರಾತ್ರಿ ಮನೆಯಿಂದ ಹೊರಗಡೆ ಬಂದಾಗ ಚಿರತೆ ದಾಳಿ ನಡೆಸಿದ್ದು, ಕೃಷ್ಣ ಶೆಟ್ಟಿ ಅವರ ಬೆನ್ನು, ಕುತ್ತಿಗೆಗೆ ತರಚಿದ ಗಾಯಗಳಾಗಿವೆ. ಅದೃಷ್ಟವಶಾತ್ ದಾಳಿ
ಯಿಂದ ಪಾರಾದ ಅವರನ್ನು ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನಾ ಸ್ಥಳಕ್ಕೆ ಮೂಡಬಿದ್ರೆ ಅರಣ್ಯ ಇಲಾಖೆಯ ಆರ್‌ಎಫ್‌ಒ ಹೇಮಗಿರಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ADVERTISEMENT

ಪಾದಚಾರಿಗೆ ಡಿಕ್ಕಿ: ಸ್ಕೂಟಿ ಸವಾರ ಸಾವು

ಪಡುಬಿದ್ರಿ: ಸ್ಕೂಟಿಗೆ ಪಾದಚಾರಿಯೊಬ್ಬರು ಡಿಕ್ಕಿ ಹೊಡದ ಪರಿಣಾಮ ಸ್ಕೂಟಿ ರಸ್ತೆಗೆ ಬಿದ್ದು ಸವಾರ ಮೃತಪಟ್ಟ ಘಟನೆ ಮೂಳೂರು ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ.

ಮಲ್ಪೆಯಿಂದ ಕೆಲಸ ಮುಗಿಸಿಕೊಂಡು ಸುರೇಶ್ ಹಾಗೂ ಹರೀಶ್ ಎಂಬುವವರು ಸ್ಕೂಟಿಯಲ್ಲಿ ಬರುತ್ತಿದ್ದರು. ಈ ವೇಳೆ ಈರಯ್ಯ ಎಂಬ ಪಾದಚಾರಿ ಅಡ್ಡ ಬಂದಿದ್ದರು. ಪರಿಣಾಮ ಸ್ಕೂಟಿ ರಸ್ತೆಗೆ ಬಿದ್ದು ಸುರೇಶ್ ಮೃತಪಟ್ಟಿದ್ದಾರೆ. ಈರಯ್ಯ ಅವರ ಕಾಲು ತುಂಡಾಗಿದ್ದು, ಹರೀಶ್‌ ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿಟ್ಟೆ : ಮಾದಕ ವ್ಯಸನಿ ಬಂಧನ

ಕಾರ್ಕಳ: ತಾಲ್ಲೂಕಿನ ನಿಟ್ಟೆ ಗ್ರಾಮದ ಗರಡಿ ಸಮೀಪ ಮಾದಕ ವಸ್ತು ಸೇವಿಸಿ ತೇಲಾಡುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶಹದತ್ (21) ಬಂಧಿತ. ಈತ ಗಾಂಜಾ ಅಥವಾ ಅಮಲು ಪದಾರ್ಥ ಸೇವನೆ ಮಾಡಿರಬಹುದು ಎಂಬ ಅನುಮಾನದ ಮೇರೆಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಮಾಡಲಾಗಿದ್ದು. ಮಾದಕ ವಸ್ತು ಸೇವನೆ ದೃಢಪಟ್ಟಿರುತ್ತದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶವ ಪತ್ತೆ

ಕುಂದಾಪುರ: ನೀಟ್ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿರುವುದರಿಂದ ಮನನೊಂದು ನದಿಗೆ ಹಾರಿದ್ದ ವಿದ್ಯಾರ್ಥಿ ಸಾಯೀಶ್ ಶೆಟ್ಟಿ (18) ಅವರ ಮೃತದೇಹ ಶುಕ್ರವಾರ ಬೆಳಿಗ್ಗೆ ನಾವುಂದ ಕಾಲೇಜು ಸಮೀಪದ ಅರಬ್ಬಿ ಸಮುದ್ರದ ಕಿನಾರೆಯಲ್ಲಿ ಪತ್ತೆಯಾಗಿದೆ.

ಸಾಯೀಶ್‌ ಯಾವುದೇ ತರಬೇತಿ ಪಡೆದುಕೊಳ್ಳದೆ ಸ್ವಯಂ ಪರಿಶ್ರಮದಲ್ಲಿ ಈ ಬಾರಿಯ ನೀಟ್ ಪರೀಕ್ಷೆ ಬರೆದಿದ್ದು, ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದರು. ಗುರುವಾರ ಬೆಳಿಗ್ಗೆ ಫಲಿತಾಂಶ ನೋಡಿದ್ದ ಬಳಿಕ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನೀಟ್ ಫಲಿತಾಂಶದಲ್ಲಿ ನಿರೀಕ್ಷೆಯಷ್ಟು ಅಂಕ ಬಾರದೆ ಇದ್ದ ಕಾರಣ ನದಿಗೆ ಹಾರುವ ದುಡುಕಿನ ನಿರ್ಧಾರ ಕೈಗೊಂಡಿರಬೇಕು ಎನ್ನುವ ಶಂಕೆ ಇದೆ. ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.