ಉಡುಪಿ: ಅಂಬಾಗಿಲು ಕಕ್ಕುಂಜೆಯಲ್ಲಿ ಈಚೆಗೆ ಪ್ರಮಿಳಾ ಬಂಗೇರಾ ಎಂಬುವರ ನಿವಾಸದಿಂದ ಚಿನ್ನಾಭರಣ ಕಳವು ಮಾಡಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಸಂತೋಷ್ ಪೂಜಾರಿಯನ್ನು ಕೃಷ್ಣ ಮಠದ ಗೀತಾ ಮಂದಿರ ಬಳಿ ಹಾಗೂ ರಾಕೇಶ್ ಪಾಲನ್ನನ್ನು ಉಜ್ವಲ್ ಬಾರ್ ಬಳಿ ವಶಕ್ಕೆ ಪಡೆದು ₹ 2,18,169 ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳಿಗೆ 15 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜನವರಿಯಲ್ಲಿ ಪ್ರಮಿಳಾ ಬಂಗೇರಾ ಅವರ ನಿವಾಸಕ್ಕೆ ನುಗ್ಗಿದ ಕಳ್ಳರು ಎರಡು ಬಂಗಾರದ ಸರ, ಬಳೆಗಳು, ಉಂಗುರಗಳು, ಕಿವಿಯ ಓಲೆ, ಬ್ರೆಸ್ಲೆಟ್ ಸೇರಿ 9 ಪವನ್ ಚಿನ್ನಾಭರಣ ಕಳವು ಮಾಡಿದ್ದರು. ಕಳುವಾದ ಸ್ವತ್ತುಗಳ ಮೌಲ್ಯ ₹ 3,15,000 ಎಂದು ಅಂದಾಜಿಸಲಾಗಿತ್ತು.
ಇನ್ಸ್ಪೆಕ್ಟರ್ ಪ್ರಮೋದ ಕುಮಾರ್ ಮಾರ್ಗದರ್ಶನದಲ್ಲಿ ಪಿಎಸ್ಐ ಪ್ರಸಾದ್ ಕುಮಾರ್, ಟಿ.ಎಂ.ಮಹೇಶ್, ವಾಸಪ್ಪ ನಾಯ್ಕ್ ಹಾಗೂ ಎಎಸ್ಐ ಅರುಣ್, ಸಿಬ್ಬಂದಿ ಸತೀಶ್ ಬೆಳ್ಳೆ, ಕಿರಣ್ ಆರೋಪಿಗಳ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು ಎಂದು ಎಂದು ಎಸ್ಪಿ ವಿಷ್ಣುವರ್ಧನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.